ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿದೇಶ ಪ್ರವಾಸದಿಂದ ಭಾರತದ ಅಭಿವೃದ್ಧಿಗೆ ಸಹಾಯಕವಾಗಲಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅಭಿಪ್ರಾಯಪಟ್ಟಿದ್ದಾರೆ.
ಲೋಕಸಭೆ ಕಲಾಪದ ವೇಳೆ ಪ್ರತಿಕ್ರಿಯಿಸಿದ ಸುಷ್ಮಾ ಸ್ವರಾಜ್, ಮೋದಿ ವಿದೇಶದಲ್ಲಿ ನೆಲೆಸಿರುವ ಭಾರತೀಯ ಎಂಬ ವಿರೋಧ ಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದರು. ಪ್ರಧಾನಿಯವರ ವಿದೇಶ ಪ್ರವಾಸದಿಂದ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಸಲಿದೆ ಅಲ್ಲದೆ, ದೇಶಕ್ಕೆ ಅಂತಾರಾಷ್ಟ್ರೀಯ ಬಂಡವಾಳ ಹರಿದು ಬರಲಿದೆ ಎಂದರು.
ಮೋದಿ ವಿದೇಶಗಳಿಗೆ ಭೇಟಿ ನೀಡಿದ ಸಮಯದಲ್ಲಿ ಕಪ್ಪುಹಣದ ಕುರಿತು ಮಾತುಕತೆಗಳಾಗಿದ್ದು ಹಣ ಹಿಂತಿರುಗಿ ಬರುವ ವಿಶ್ವಾಸವಿದೆ. ಭೇಟಿಯಿಂದಾಗಿ ವಿದೇಶಗಳಿಂದಲೂ ಭದ್ರತಾ ಸಹಕಾರ ಸಿಕ್ಕಿದ್ದು, ವಿವಿಧ ರೀತಿಯ ಒಪ್ಪಂದಗಳ ಕುರಿತು ಚರ್ಚೆಯಾಗಿದೆ ಎಂದು ತಿಳಿಸಿದರು.
ಮೋದಿ ಅವರು ನೆರೆಯ ರಾಷ್ಟ್ರಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ಇದೇ ಕಾರಣಕ್ಕೆ ಅವರು ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ವಿದೇಶಿಯರಿಗೆ ಆಹ್ವಾನ ನೀಡಿದ್ದು ಎಂದು ಹೇಳಿದ ಸುಷ್ಮಾ ಸ್ವರಾಜ್ ಭಾರತ ಸುರಕ್ಷಿತ ರಾಷ್ಟ್ರವಾದಾಗ ಮಾತ್ರವೇ ಅಭಿವೃದ್ಧಿ ರಾಷ್ಟ್ರವಾಗಲು ಸಾಧ್ಯ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು.