ಕೊಡಗು : 'ಪಶ್ಚಿಮ ಘಟ್ಟ'ಗಳ ಬಗ್ಗೆ ಕಸ್ತೂರಿ ರಂಗನ್ ವರದಿ ಅನುಷ್ಠಾನಕ್ಕೆ ವಿರೋಧಿಸಿ ವಿವಿಧ ಸಂಘಟನೆಗಳು, ಸರ್ವ ಪಕ್ಷಗಳು ಕರೆ ನೀಡಿದ್ದ ಕೊಡಗು ಬಂದ್ ಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ.
ಬಂದ್ ಅಂಗವಾಗಿ, ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಹೋಟೆಲ್ ಪೆಟ್ರೊಲ್ ಬಂಕ್ ಗಳ ಕಾರ್ಯ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಮಂಜಿನ ನಗರಿ ಸಂಪೂರ್ಣ ಸ್ಥಬ್ಧಗೊಂಡಿದ್ದು ಕಣ್ಣು ಹಾಯಿಸಿದಲ್ಲೆಲ್ಲಾ ಪೊಲೀಸರೇ ಕಾಣುತ್ತಿದ್ದಾರೆ.
ಬಂದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು ನಗರದ ಹಲವೆಡೆ ಮಫ್ತಿ ಪೊಲೀಸರು ವಿಡಿಯೋ ಚಿತ್ರೀಕರಣ ನಡೆಸುತ್ತಿದ್ದಾರೆ. ಬೆರಳೆಣಿಕೆಯ ಜನಸಾಮಾನ್ಯರ ಓಡಾಟ ಕಂಡುಬರುತ್ತಿದೆ. ಜಿಲ್ಲೆಗೆ ಆಗಮಿಸಿದ ಕೆಲ ಪ್ರಯಾಣಿಕರು ಜಿಲ್ಲೆಯಿಂದ ತೆರಳಲು ಬಸ್ ನಿಲ್ದಾಣಗಳಲ್ಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪಶ್ಚಿಮಘಟ್ಟ ಸಂರಕ್ಷಣೆ ಬಗ್ಗೆ ಮಾಧವ ಗಾಡ್ಗೀಳ್ ವರದಿ ಬಂದ ನಂತರ ಕೇಂದ್ರ ಸರ್ಕಾರ 2012 ಆಗಸ್ಟ್ 17ರಂದು ಬಾಹ್ಯಾಕಾಶ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್ ಅಧ್ಯಕ್ಷತೆಯಲ್ಲಿ ಉನ್ನತ ಹಂತದ ಸಮಿತಿ ರಚಿಸಿತ್ತು. ಆದರೆ, ಈ ವರದಿಯನ್ನು ಜಾರಿಗೊಳಿಸಬಾರದು ಎಂದು ಕೊಡಗಿನಲ್ಲಿ ಜನರು ಒತ್ತಾಯಿಸುತ್ತಿದ್ದಾರೆ.
ಪಶ್ಚಿಮಘಟ್ಟದಲ್ಲಿ ಗಣಿಗಾರಿಕೆ ನಿಷೇಧಿಸುವುದು, ಪರಿಸರದ ಮೇಲೆ ಹಾನಿಯುಂಟು ಮಾಡುವ ಕೈಗಾರಿಕೆಗಳನ್ನು ನಿಷೇಧಿಸುವುದು, ನಗರೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗಳ ಮೇಲೆ ನಿಯಂತ್ರಣ, ಕೃಷಿಯಲ್ಲಿ ರಾಸಾಯನಿಕ ಕೀಟನಾಶಕ ಬಳಸದಂತೆ ನಿಷೇಧ ಮುಂತಾದ ಪ್ರಸ್ತಾವನೆಗಳಿವೆ.
ಸಮಿತಿ ಪಶ್ಚಿಮ ಘಟ್ಟದಲ್ಲಿ ಹಲವು ಪ್ರದೇಶಗಳನ್ನು ಸೂಕ್ಷ್ಮ ವಲಯ ಎಂದು ಗುರುತಿಸಿದೆ. ಕೊಡಗು ಸೇರಿದಂತೆ ರಾಜ್ಯದ ಹತ್ತು ಜಿಲ್ಲೆಗಳು ಈ ಸೂಕ್ಷ್ಮ ವಲಯದಲ್ಲಿವೆ. ಒಟ್ಟು 1,550 ಗ್ರಾಮಗಳು ಇದರ ವ್ಯಾಪ್ತಿಯೊಳಗೆ ಬರುತ್ತವೆ. ಕೊಡುಗು ಜಿಲ್ಲೆಯ 53 ಗ್ರಾಮಗಳ ಇದರಲ್ಲಿವೆ.