Mangalore : ಅಡಕೆ ಆರೋಗ್ಯಕ್ಕೆ ಹಾನಿಕರ ಎಂಬ ವ್ಯಾಜ್ಯ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇದ್ದು, ಅಡಕೆ ಬೆಳೆಗಾಗರರು ಆತಂಕಪಡುವ ಅಗತ್ಯವಿಲ್ಲ ಎಂದು ಕೇಂದ್ರ ಕಾನೂನು ಸಚಿವ ಡಿ.ವಿ ಸದಾನಂದ ಗೌಡ ಭರವಸೆ ನೀಡಿದ್ದಾರೆ.
ಅಡಕೆಯಲ್ಲಿ ಔಷಧೀಯ ಅಂಶಗಳೂ ಇವೆ. ಈ ಬಗ್ಗೆ ಚೆನ್ನೈನ ವೈದ್ಯಕೀಯ ಕಾಲೇಜಿನ ಸಂಶೋಧನಾ ಸಂಸ್ಥೆಯಿಂದ ಸಿಕ್ಕಿರುವ ಸಂಶೋಧನಾ ಪ್ರಬಂಧಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಈ ಕುರಿತು ಇನ್ನಷ್ಟು ಸಂಶೋಧನೆ ನಡೆಸಿ ತಜ್ಞರಿಂದ ವರದಿ ಪಡೆದುಕೊಳ್ಳಬೇಕಿದೆ. ಅಡಕೆ ಬೆಳೆಗಾರರಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ಕ್ರಮಕೈಗೊಳ್ಳುವ ಬಗ್ಗೆ ಮಾತುಕತೆ ನಡೆಸುತ್ತಿದ್ದೇವೆ. ಈಗಾಗಲೇ ಪಕ್ಷದ ಸಂಸದರ ನಿಯೋಗದ ಜತೆ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ ಎಂದರು.
ಕಸ್ತೂರಿ ರಂಗನ್ ವರದಿಯಿಂದ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ತೊಂದರೆ ಆಗುತ್ತದೆ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ. ಉಪಗ್ರಹದ ಅಂಕಿ ಅಂಶಗಳ ಆಧಾರದಲ್ಲಿ ಕಸ್ತೂರಿ ರಂಗನ್ ವರದಿ ತಯಾರಿಸಲಾಗಿದ್ದು, ವಾಸ್ತವ ಅಂಶಗಳಿಗೂ ಉಪಗ್ರಹ ಆಧಾರದ ಸಮೀಕ್ಷೆಗೂ ಕೊಂಚ ವ್ಯತ್ಯಾಸ ಇದೆ ಎಂಬುದನ್ನು ಹಸಿರು ಪೀಠವೇ ಒಪ್ಪಿಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯಗಳ ಆಯಾ ಪ್ರದೇಶಗಳಿಗೆ ತೆರಳಿ ಅರಣ್ಯ, ಕೃಷಿ, ವಾಸ್ತವ್ಯದ ಕುರಿತು ಗ್ರಾಮ ಮಟ್ಟದಿಂದಲೇ ಕೂಲಂಕುಷ ಅಧ್ಯಯನ ನಡೆಸಬೇಕು ಎಂದು ಸೂಚಿಸಿತ್ತು. ಆದರೆ ರಾಜ್ಯ ಸರ್ಕಾರ ಈ ಬಗ್ಗೆ ಇದುವರೆಗೆ ಎಚ್ಚೆತ್ತುಕೊಂಡಿಲ್ಲ ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿಯಿಂದ ಉತ್ತರ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ತೊಂದರೆ ಆಗಲಿದ್ದು , ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು . ಗ್ರಾಮಮಟ್ಟದಲ್ಲಿ ತೊಂದರೆಗೆ ಒಳಗಾಗುವವರ ಬಗ್ಗೆ ಸಮಗ್ರ ವರದಿ ನೀಡಬೇಕು. ಇಲ್ಲದೆ ಇದ್ದರೆ ಆ ಭಾಗದಲ್ಲಿ ವಾಸವಾಗಿರುವವರಿಗೆ ತೊಂದರೆ ಆಗಲಿದೆ ಎಂದು ಆಗ್ರಹಿಸಿದರು.