ಬೆಂಗಳೂರು : ಪಶ್ಚಿಮ ಘಟ್ಟ ಸಂರಕ್ಷಣೆ ಕುರಿತ ಡಾ|ಕಸ್ತೂರಿರಂಗನ್ ವರದಿಯ ಬಗ್ಗೆ ಕರಾವಳಿ ಹಾಗೂ ಮಲೆನಾಡು ಭಾಗದ ಜನರಲ್ಲಿದ್ದ ಆತಂಕ ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮಹತ್ವದ ತೀರ್ಮಾನ ಕೈಗೊಂಡಿದ್ದು, ಜನವಸತಿ ಗ್ರಾಮಗಳು, ಖಾಸಗಿ ಜಮೀನು ಪರಿಸರ ಸೂಕ್ಷ್ಮ ವಲಯದಿಂದ ಕೈಬಿಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಲು ನಿರ್ಧರಿಸಿದೆ.
ಸರಕಾರದ ಈ ನಿರ್ಧಾರದಿಂದ ಸಂರಕ್ಷಿತ ಹಾಗೂ ಮೀಸಲು ಅರಣ್ಯ, ರಾಷ್ಟ್ರೀಯ ಉದ್ಯಾನ ಹಾಗೂ ವನ್ಯಜೀವಿಧಾಮ ಮಾತ್ರ ’ಪರಿಸರ ಸೂಕ್ಷ್ಮ ವಲಯ'ದ ವ್ಯಾಪ್ತಿಗೆ ಬರಲಿದ್ದು ಆ ಭಾಗದ ಜನ ನಿಟ್ಟುಸಿರು ಬಿಡುವಂತಾಗಿದೆ. ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಡಾ|ಕಸ್ತೂರಿರಂಗನ್ ವರದಿ ಅಧ್ಯಯನ ನಡೆಸಲು ರಚಿಸಲಾಗಿದ್ದ ಸಂಪುಟ ಉಪ ಸಮಿತಿಯ ಶಿಫಾರಸುಗಳಿಗೆ ಅನುಮೋದನೆ ನೀಡಲಾಗಿದೆ.
ಸಭೆಯ ಅನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ಡಾ|ಕಸ್ತೂರಿ ರಂಗನ್ ವರದಿಯಲ್ಲಿನ ಶಿಫಾರಸುಗಳ ಪೈಕಿ ಪರಿಸರ ಸೂಕ್ಷ್ಮ ವಲಯದಲ್ಲಿ ಗಣಿಗಾರಿಕೆ ಹಾಗೂ ಅಪಾಯಕಾರಿ ಕೈಗಾರಿಕೆಗಳ ಸ್ಥಾಪನೆಯನ್ನು ಸಂಪೂರ್ಣ ನಿಷೇಧ ಮಾಡುವುದಕ್ಕೆ ಸರಕಾರ ಒಪ್ಪಿದೆ.
ಉಳಿದಂತೆ ಮರಳು ಮತ್ತು ಕಲ್ಲು ಗಣಿಗಾರಿಕೆ ಹಾಗೂ ಜಲವಿದ್ಯುತ್ ಯೋಜನೆ ವಿಚಾರದಲ್ಲಿ ಸ್ಥಳೀಯ ಅಗತ್ಯಕ್ಕೆ ತಕ್ಕಂತೆ ನಿಯಂತ್ರಣಕ್ಕೆ ಒಳಪಟ್ಟು ಅನುಮತಿ ನೀಡುವುದು. ಅದೇ ರೀತಿ 20 ಸಾವಿರ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಹೊಸ ಕಟ್ಟಡ ನಿರ್ಮಾಣ, ಹೊಸ ಲೇ ಔಟ್ ರಚನೆಗೂ ರಾಜ್ಯ ಸರಕಾರದ ನಿಯಂತ್ರಣಕ್ಕೊಳಡಿಸಲು ಶಿಫಾರಸು ಮಾಡಲಾಗಿದೆ ಎಂದು ವಿವರಿಸಿದರು.
ಆ ಭಾಗದಲ್ಲಿ ಪ್ರಸ್ತುತ ಇರುವ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಯೋಜನೆಗಳಿಗೆ ಯಾವುದೇ ತೊಂದರೆ ಇಲ್ಲ. ಆದರೆ, ಹೊಸ ಯೋಜನೆ ಅಥವಾ ವಿಸ್ತರಣೆಗೆ ಅವಕಾಶ ಕೊಡದಿರಲು ಶಿಫಾರಸು ಮಾಡಲಾಗಿದೆ. 40 ತಾಲೂಕುಗಳು ಮಾತ್ರ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಬರಲಿದ್ದು, ಜನವಸತಿ ಇರುವ ಯಾವುದೇ ಹಳ್ಳಿಗಳನ್ನು ಸೇರಿಸಿಲ್ಲ. ಹೀಗಾಗಿ, ಆ ಭಾಗದ ಜನರ ನಿರೀಕ್ಷೆಗೂ ಮೀರಿ ಸರಕಾರ ತೀರ್ಮಾನ ಕೈಗೊಂಡಿದೆ. ಜನರ ಭಾವನೆ, ಅಭಿಪ್ರಾಯಗಳಿಗೆ ಸಂಪೂರ್ಣ ಮನ್ನಣೆ ನೀಡಲಾಗಿದೆ. ಎಪ್ರಿಲ್ 30ರೊಳಗೆ ರಾಜ್ಯ ಸರಕಾರದ ತೀರ್ಮಾನವನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಹೇಳಿದರು.