ನವದೆಹಲಿ : 'ದೆಹಲಿ'ಯಲ್ಲಿ ವಿಧಾನಸಭಾ ಚುನಾವಣೆ ಎದುರಿಸಲು ಸಜ್ಜುಗೊಳ್ಳುತ್ತಿರುವ ಬಿಜೆಪಿ ಈ ಬಾರಿ ವಿನೂತನವಾಗಿ ಪ್ರಣಾಳಿಕೆ ಬಿಡುಗಡೆ ಮಾಡಲು ಮುಂದಾಗಿದೆ.
ದೆಹಲಿ ಜನತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ನಗರಸಭೆ(ಎನ್.ಡಿ.ಎಂ.ಸಿ)ಯಿಂದ ಮಾಹಿತಿ ಪಡೆದು ಅದಕ್ಕೆ ಅನುಗುಣವಾಗಿ ಪಕ್ಷದ ಪ್ರಣಾಳಿಕೆ ತಯಾರು ಮಾಡಲು ಬಿಜೆಪಿ ನಿರ್ಧರಿಸಿದೆ. ಜನರ ಸಮಸ್ಯೆಗಳನ್ನೇ ನಾವು ಚುನಾವಣಾ ವಿಷಯವಾಗಿ ಪರಿಗಣಿಸಲಿದ್ದೇವೆ ಎಂದು ಬಿಜೆಪಿ ನಾಯಕ ಕರಣ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಜನಸಾಮಾನ್ಯರಿಗೆ ಉತ್ತಮ ಸವಲತ್ತುಗಳನ್ನು ನೀಡಬೇಕಿದ್ದು ನಗರಸಭೆಯನ್ನು ಅಭಿವೃದ್ಧಿಗೊಳಿಸಬೇಕಿದೆ, ಈ ಬಗ್ಗೆ ಬಿಜೆಪಿ ಹೆಚ್ಚು ಗಮನ ಹರಿಸಲಿದೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಎನ್.ಡಿ.ಎಂ.ಸಿ ಪ್ರದೇಶಕ್ಕೆ ಸಂಪೂರ್ಣವಾಗಿ ವೈಫೈ ಸೌಲಭ್ಯ ಕಲ್ಪಿಸುವುದು ಬಿಜೆಪಿಯ ಪ್ರಣಾಳಿಕೆಯ ವಿಷಯಗಳಲ್ಲಿ ಒಂದಾಗಿದೆ.
ಜನವರಿ ಮೊದಲ ವಾರದಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆಯಾಗುವ ಸಾಧ್ಯತೆ ಇದೆ. ದೆಹಲಿಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆಯದ ಕಾರಣ, 2015ರ ಫ್ರೆಬ್ರವರಿಯಲ್ಲಿ ಮತ್ತೊಮ್ಮೆ ಚುನಾವಣೆ ನಡೆಯಲಿದೆ. ಇದಕ್ಕಾಗಿ ಆಮ್ ಆದ್ಮಿ ಪಕ್ಷ ಹಾಗೂ ಬಿಜೆಪಿ ತಯಾರಿ ನಡೆಸುತ್ತಿವೆ.