ಗುವಾಹಟಿ : ಭಾರತದಲ್ಲಿ ನಡೆಯುವ ಉಗ್ರರ ದಾಳಿಯ ಹಿಂದೆ ಪಾಕಿಸ್ತಾನ ಸರ್ಕಾರದ ಕೈವಾಡ ಇದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.
ಅಸ್ಸಾಂ ನ ಗುವಾಹಟಿಯಲ್ಲಿ ಮಾತನಾಡಿದ ಅವರು,12 ಮಂದಿಯನ್ನು ಬಲಿ ಪಡೆದ ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಸೆಕ್ಟರ್ನಲ್ಲಿ ನಡೆದ ಗುಂಡಿನ ಕಾಳಗವನ್ನು ಪ್ರಸ್ತಾಪಿಸಿ, ದಾಳಿಯ ಹಿಂದೆ ಪಾಕ್ ಸರ್ಕಾರದ ಕೈವಾಡ ಇಲ್ಲ ಎನ್ನುವುದು ಸುಳ್ಳು ಎಂದರು.
ಪಾಕಿಸ್ತಾನದ ಐಎಸ್ಐ ಅನ್ನು ಉಗ್ರ ಸಂಘಟನೆ ಎಂದು ಘೋಷಿಸುವಂತೆ ಪಾಕಿಸ್ತಾನಕ್ಕೆ ಕೇಳಿಕೊಂಡ ರಾಜನಾಥ್ ಸಿಂಗ್, ಐಎಸ್ಐಎಸ್ ಉಗ್ರರ ಬಗ್ಗೆ ಎಚ್ಚರಿಕೆಯಿಂದಿರಬೇಕು. ದೇಶದ ಯುವಕರು ಐಎಸ್ಐಎಸ್ ಗೆ ಆಕರ್ಷಿತರಾಗುತ್ತಿದ್ದಾರೆ. ಪಾಕ್ ಉಗ್ರರ ಜತೆಗೂ ಕೆಲವರು ಸಂಪರ್ಕ ಹೊಂದಿದ್ದಾರೆ. ಇದಕ್ಕೆಲ್ಲ ಕಡಿವಾಣ ಹಾಕುವ ಅಗತ್ಯವಿದೆ ಎಂದು ತಿಳಿಸಿದರು.
ಅಲ್ ಖೈದಾ ಉಗ್ರ ಸಂಘಟನೆ ಭಾರತದಲ್ಲಿ ಹೊಸ ಸಂಘಟನೆಯನ್ನು ಹುಟ್ಟುಹಾಕುತ್ತಿದೆ. ಇದು ತುಂಬಾ ಅಪಾಯಕಾರಿಯಾಗಿದ್ದು, ಉಗ್ರ ಸಂಘಟನೆಗಳಿಂದ ದೇಶದ ಭದ್ರತೆಗೆ ಧಕ್ಕೆಯಾಗಲಿದೆ. ಅಲ್ ಖೈದಾವನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.
ಇದೇ ವೇಳೆ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಗೃಹ ಸಚಿವರು ಸೂಚಿಸಿದರು.