ಮುಂಬೈ : 'ದೇವೇಂದ್ರ ಫಡ್ನವೀಸ್' ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಶಿವಸೇನೆಯನ್ನು ಸೇರಿಸಿಕೊಳ್ಳುವ ಸಂಬಂಧ ಬಿಜೆಪಿ ನಾಯಕರು ಶಿವಸೇನೆ ಮುಖಂಡ ಉದ್ಧವ್ ಠಾಕ್ರೆಯೊಂದಿಗೆ ಚರ್ಚೆ ನಡೆಸಲಿದ್ದಾರೆ.
ಬಿಜೆಪಿ ನಾಯಕರಾದ ದೇವೇಂದ್ರ ಪ್ರಧಾನ್, ಚಂದ್ರಕಾಂತ್ ಪಾಟೀಲ್ ಅವರು ಶಿವಸೇನೆ ಯೊಂದಿಗೆ ಮಾತುಕತೆ ನಡೆಸಿ ದೇವೇಂದ್ರ ಫಡ್ನವೀಸ್ ಸರ್ಕಾರವನ್ನು ಸೇರುವಂತೆ ಮನವೊಲಿಕೆ ಮಾಡಲಿದ್ದಾರೆ.
ಶಿವಸೇನೆ ಬಿಜೆಪಿ ಸರ್ಕಾರ ಸೇರಬೇಕೆಂಬುದು ಉಭಯ ಪಕ್ಷಗಳ ಕಾರ್ಯಕರ್ತರ ಒತ್ತಾಯ ಮಾತ್ರವಲ್ಲ, ಇದು ರಾಜ್ಯದ ಜನತೆಯ ಅಭಿಪ್ರಾಯವೂ ಹೌದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಹೇಳಿದ್ದರು.
ಇತ್ತೀಚೆಗಷ್ಟೇ ಎನ್.ಸಿ.ಪಿ ಮಧ್ಯಂತರ ಚುನಾವಣೆ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಶಿವಸೇನೆ ಎನ್.ಸಿ.ಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿತ್ತು. ಈ ಮೂಲಕ ಬಿಜೆಪಿ ಸರ್ಕಾರದ ಬೆಂಬಲಕ್ಕೆ ನಿಂತಿತ್ತು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಶಿವಸೇನೆ-ಬಿಜೆಪಿ ಮೈತ್ರಿ ಮಾಡುವ ಲಕ್ಷಣ ಕಂಡುಬಂದಿತ್ತು. ಇದೀಗ ಶಿವಸೇನೆ ಸಹ ಬಿಜೆಪಿ ಸರ್ಕಾರ ಸೇರಲು ಆಸಕ್ತಿ ತೋರಿದ್ದು ಈ ಸಂಬಂಧ ಉಭಯ ಪಕ್ಷಗಳ ನಡುವೆ ಮಾತುಕತೆ ನಡೆಯಲಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಸೀಟು ಹಂಚಿಕೆ ಸಂಬಂಧ ಮಾತುಕತೆ ವಿಫಲವಾದ ಕಾರಣ 25 ವರ್ಷಗಳ ಸುದೀರ್ಘ ಮೈತ್ರಿ ಮುರಿದು ಬಿದ್ದಿತ್ತು.