ಲಖ್ನೌ : 'ಅಲೀಘರ್ ಮುಸ್ಲಿಂ ವಿಶ್ವವಿದ್ಯಾನಿಲಯ'ದಲ್ಲಿ ರಾಜಾ ಮಹೇಂದ್ರ ಪ್ರತಾಪ್ ಜನ್ಮದಿನಾಚರಣೆಯನ್ನು ಆಚರಿಸಲು ವಿವಿಯ ಕುಲಪತಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಅಲಿಘರ್ ಮುಸ್ಲಿಂ ವಿವಿಯ ಆವರಣದಲ್ಲಿ ಭಾರತದ ರಾಜ, ಸ್ವಾತಂತ್ರ್ಯ ಹೋರಾಟಗಾರ ಮಹೇಂದ್ರ ಪ್ರತಾಪ್ ಅವರ ಜನ್ಮದಿನವನ್ನು ಆಚರಿಸುವ ಕುರಿತು ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಪತ್ರ ಬರೆದಿರುವ ವಿವಿಯ ಕುಲಪತಿ ಜಮೀರ್ ಉದ್ದೀನ್ ಶಾ, ಮಹೇಂದ್ರ ಪ್ರತಾಪ್ ಅವರ ಜನ್ಮದಿನವನ್ನು ಆಚರಿಸುವುದರಿಂದ ಕೋಮುಭಾವನೆಗಳನ್ನು ಕೆರಳಿಸುತ್ತದೆ ಎಂದು ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ಮಹೇಂದ್ರ ಪ್ರತಾಪ್ ಅವರ ಜನ್ಮದಿನವನ್ನು ವಿವಿಯ ಆವರಣದಲ್ಲಿ ಆಚರಿಸುವುದು ಬೇಡ ಎಂದು ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿಗೆ ಪತ್ರ ಬರೆಯಲಾಗಿದೆ.
ಡಿ.1ರಂದು ರಾಜ ಮಹೇಂದ್ರ ಪ್ರತಾಪ್ ಅವರ ಜನ್ಮದಿನವನ್ನು ಉತ್ತರ ಪ್ರದೇಶದ ಅಲೀಘರ್ ಮುಸ್ಲಿಂ ವಿವಿಯ ಆವರಣದಲ್ಲಿ ಅದ್ದೂರಿಯಿಂದ ಆಚರಿಸಲು ಬಿಜೆಪಿ ತೀರ್ಮಾನಿಸಿತ್ತು. ಆದರೆ ವಿವಿಯಿಂದ ಇದಕ್ಕೆ ತೀವ್ರ ವಿರೋಧ ಉಂಟಾಗಿದೆ.
ಇದೇ ವೇಳೆ ಸಮಾಜವಾದಿ ಪಕ್ಷ ಕೂಡ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿದ್ದು, ಜಾಟ್ ಸಮುದಾಯದ ರಾಜ ಮಹೇಂದ್ರ ಪ್ರತಾಪ್ ಜನ್ಮದಿನಾಚರಣೆ ಆಚರಿಸುವ ಮೂಲಕ ಬಿಜೆಪಿ ಕೋಮುಗಲಭೆ ಸೃಷ್ಠಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದೆ.
ಸ್ವಾತಂತ್ರ್ಯ ಹೋರಾಟಗಾರ ಮಹೇಂದ್ರ ಪ್ರತಾಪ್ ಅಲೀಘರ್ ಮುಸ್ಲಿಂ ವಿವಿಯ ವಿದ್ಯಾರ್ಥಿಯೂ ಆಗಿದ್ದರು ಎಂಬುದು ವಿಶೇಷ.