ನವದೆಹಲಿ : ವಿದ್ಯಾರ್ಥಿನಿಯರಿಗೆ ಗ್ರಂಥಾಲಯದಲ್ಲಿ ಪ್ರವೇಶ ನಿರಾಕರಿಸಿರುವುದಕ್ಕೆ ವರದಿ ನೀಡುವಂತೆ ಅಲೀಘರ್ ಮುಸ್ಲಿಂ ವಿಶ್ವವಿದ್ಯಾನಿಲಯಕ್ಕೆ ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ಆದೇಶ ಹೊರಡಿಸಿದ್ದಾರೆ.
"ಗ್ರಂಥಾಲಯಕ್ಕೆ ಪ್ರವೇಶ ನಿರಾಕರಿಸುವುದು ಮಹಿಳೆಯರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡಂತೆ" ಮೂಲಭೂತ ಹಕ್ಕುಗಳ ಉಲ್ಲಂಘನೆ ಸಹಿಸಲು ಸಾಧ್ಯವಿಲ್ಲ ಎಂದು ಹೆಚ್.ಆರ್.ಡಿ ಸಚಿವೆ ಸ್ಮೃತಿ ಇರಾನಿ ಅಲೀಘರ್ ವಿವಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. ಅಲ್ಲದೇ ವಿವಿ ತೆಗೆದುಕೊಂಡ ನಿರ್ಧಾರದ ಬಗ್ಗೆ ವಿಸ್ತೃತ ವರದಿ ನೀಡಬೇಕೆಂದು ತಾಕೀತು ಮಾಡಲಾಗಿದೆ.
ಅಲೀಘರ್ ಮುಸ್ಲಿಂ ವಿವಿ ಯ ಮಹಿಳಾ ಕಾಲೇಜಿನ 3000 ವಿದ್ಯಾರ್ಥಿನಿಯರಿಗೆ ಮೌಲಾನ ಆಜಾದ್ ಗ್ರಂಥಾಲಯಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಯುವತಿಯರಿಗೆ ಗ್ರಂಥಾಲಯ ಪ್ರವೇಶಕ್ಕೆ ಅನುಮತಿ ನೀಡಿದರೆ, ವಿದ್ಯಾರ್ಥಿನಿಯರಿಗಿಂತ ನಾಲ್ಕು ಪಟ್ಟು ಯುವಕರು ಅಲ್ಲಿ ಜಮಾವಣೆಯಾಗುವ ಸಾಧ್ಯತೆ ಇದ್ದು, ಗ್ರಂಥಾಲಯದ ಶಿಸ್ತು ಹಾಳಾಗುತ್ತದೆ ಎಂದು ವಿಶ್ವವಿದ್ಯಾನಿಲಯದ ಉಪಕುಲಪತಿ ಜಮೀರ್ ಉದ್ದೀನ್ ಶಾ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಉಪಕುಲಪತಿಗೆ ವರದಿ ನೀಡುವಂತೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಆದೇಶಿಸಿದ್ದಾರೆ.
ವಿದ್ಯಾರ್ಥಿನಿಯರ ಮೂಲಭೂತ ಹಕ್ಕುಗಳಿಗೆ ಧಕ್ಕೆಯುಂಟುಮಾಡುತ್ತಿರುವ ವಿಶ್ವವಿದ್ಯಾಲಯದ ವಿರುದ್ಧ ದೇಶಾದ್ಯಂತ ಪಕ್ಷಾತೀತವಾಗಿ ಖಂಡನೆ ವ್ಯಕ್ತವಾಗಿದೆ.