ನವದೆಹಲಿ : ಸಂಸತ್ ಚಳಿಗಾಲ ಅಧಿವೇಶನ ಆರಂಭವಾಗಿ ಮೂರು ದಿನಗಳಾದರು ಸುಗಮ ಕಲಾಪ ಸಾಧ್ಯವಾಗಿಲ್ಲ, ಮೂರನೇ ದಿನವಾದ ಇಂದು ಕೂಡ ಕಪ್ಪುಹಣದ ವಿಚಾರವಾಗಿ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ವಿಪಕ್ಷಗಳು ಗದ್ದಲ ನಡೆಸಿವೆ.
ವಿಪಕ್ಷಗಳ ಒತ್ತಾಯದ ಮೇರೆಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಈ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳಲಾಗಿದೆ. ಕಾಂಗ್ರೆಸ್ ನ ಹಲವು ನಾಯಕರು ಕಪ್ಪು ಹಣದ ವಿಷಯದಲ್ಲಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಚುನಾವಣೆಗೂ ಮೊದಲು ದೇಶದ ಬಜೆಟ್ ನ ಸುಮಾರು ಐದರಷ್ಟು ಮೊತ್ತದ ಕಪ್ಪುಹಣವನ್ನು ಭಾರತಕ್ಕೆ ವಾಪಸ್ ತರುತ್ತೇವೆ ಎಂದು ನರೇಂದ್ರ ಮೋದಿ ಹೇಳಿಕೆ ನೀಡಿದ್ದರು. ಈ ಮೂಲಕ ಸರ್ಕಾರವನ್ನು ಬದಲಾಯಿಸಿದರೆ ಕಪ್ಪು ಹಣ ವಾಪಸ್ ಬರುವುದೆಂದು ದೇಶದ ಜನರನ್ನು ನಂಬಿಸಲಾಗಿತ್ತು. ಯುಪಿಎ ಸರ್ಕಾರದ ಹೆಸರು ಹಾಳುಗೆಡವುದಷ್ಟೆ ಬಿಜೆಪಿ ಉದ್ದೇಶವಾಗಿತ್ತು ಎಂದು ಕಾಂಗ್ರೆಸ್ ಮುಖಂಡ ಆನಂದ ಶರ್ಮಾ ವಾಗ್ದಾಳಿ ನಡೆಸಿದರು.
ಕಪ್ಪುಹಣವನ್ನು ವಾಪಸ್ ತರಲು ಯುಪಿಎ ಸರ್ಕಾರವೇ ಕಾರ್ಯಪ್ರವೃತ್ತಿಯಾಗಿತ್ತು. ಆದರೆ ಬಿಜೆಪಿ ನಾಯಕರು ದೇಶದ ಜನರ ದಾರಿ ತಪ್ಪಿಸುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ ಈಗ ಸಿಕ್ಕಿರುವ ಮಾಹಿತಿಯನ್ನು ಸಂಪೂರ್ಣ ಬಹಿರಂಗಗೊಳಿಸಬೇಕು ಮತ್ತು ವಿದೇಶದಲ್ಲಿ ಕಪ್ಪುಹಣ ಇಟ್ಟಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಲೋಕಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮಾತನಾಡಿ, ಈ ಕೂಡಲೆ ಕಪ್ಪುಹಣ ಹೊಂದಿರುವವರ ಹೆಸರುಗಳನ್ನು ಬಹಿರಂಗಪಡಿಸಬೇಕು. ಕಪ್ಪು ಹಣ ವಾಪಸ್ ತರಲು ಸರ್ಕಾರ ಯಾವ ಯಾವ ದೇಶಗಳೊಂದಿಗೆ ಮಾತುಕತೆ ನಡೆಸಿದೆ ಎಂದು ಪ್ರಧಾನಿ ಮೋದಿ ತಿಳಿಸಲಿ. ನೂರು ದಿನಗಳೊಳಗೆ ಕಪ್ಪು ಹಣ ತರುತ್ತೇವೆ ಎಂದು ವಚನ ಕೊಟ್ಟಿದ್ದ ಸರ್ಕಾರ ಈಗ ಮಾತಿಗೆ ಸೋತಿದೆ ಎಂದು ಗುಡುಗಿದ್ದಾರೆ.