ನವದೆಹಲಿ : ಭಾರತ-ಪಾಕಿಸ್ತಾನದ ನಡುವೆ ದ್ವಿಪಕ್ಷೀಯ ಮಾತುಕತೆ ನಡೆಯುವುದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಸಯೀದ್ ಅಕ್ಬರುದ್ದೀನ್ ಸ್ಪಷ್ಟಪಡಿಸಿದ್ದಾರೆ.
ನೇಪಾಳದ ಕಠ್ಮಂಡುವಿನಲ್ಲಿ ಆರಂಭವಾಗಿರುವ ಎರಡು ದಿನಗಳ 18ನೇ ಸಾರ್ಕ್ ಶೃಂಗಸಭೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರು ಔಪಚಾರಿಕ ಅಲ್ಲದಿದ್ದರೂ ಅನೌಚಾರಿಕ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ ಉಭಯ ನಾಯಕರ ನಡುವೆ ಯಾವುದೇ ಮಾತುಕತೆ ನಡೆಯುತ್ತಿಲ್ಲ ಎಂದು ಅಕ್ಬರುದ್ದೀನ್ ತಿಳಿಸಿದ್ದಾರೆ.
ನಾವು ಮಹತ್ವಪೂರ್ಣ ಮತ್ತು ಅರ್ಥಪೂರ್ಣ ದ್ವಿಪಕ್ಷೀಯ ಮಾತುಕತೆ ನಡೆಸಬೇಕಾಗಿದ್ದು, ಇಂದು ಶ್ರೀಲಂಕಾ, ಅಫ್ಘಾನಿಸ್ತಾನ ಮತ್ತು ಮಾಲ್ಡಿವ್ಸ್ ಹಾಗೂ ಬಾಂಗ್ಲಾದೇಶ, ಭುತಾನ್ ಪ್ರಧಾನಿಗಳೊಂದಿಗೆ ಮೋದಿ ಅವರ ದ್ವಿಪಕ್ಷೀಯ ಸಭೆ ನಿಗದಿಯಾಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ, ಭಾರತದ ಜತೆ ಮಾತುಕತೆಗೆ ಪಾಕ್ ಸಿದ್ಧ, ಆದರೆ ಮಾತುಕತೆಗೆ ಸಂಬಂಧಿಸಿದಂತೆ 'ಚೆಂಡು ಭಾರತದ ಅಂಗಳದಲ್ಲಿದೆ' ಎಂಬ ಪಾಕ್ ಪ್ರಧಾನಿ ಷರೀಫ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅಕ್ಬರುದ್ದೀನ್, ಅರ್ಥಪೂರ್ಣ ಮಾತಕತೆಯ ಬಗ್ಗೆ ಭಾರತಕ್ಕೆ ಒಲವು ಇದೆ. ಆದರೆ ಇದನ್ನು ಪಾಕಿಸ್ತಾನ ಖಚಿತಪಡಿಸಬೇಕು ಮತ್ತು ಅರ್ಥಪೂರ್ಣ ಮಾತುಕತೆ ಅಂದರೆ ಏನೂ ಅಂತ ಅವರಿಗೂ ಗೊತ್ತು. ಅದನ್ನು ಅರ್ಥಮಾಡಿಕೊಳ್ಳಬೇಕು ಎಂದು ಪ್ರತಿಕ್ರಿಯಿಸಿದ್ದರೆ.