ನವದೆಹಲಿ : ದೇಶ ಮುನ್ನಡೆಸುವುದು ಎಲ್ಲ ಸಂಸದರ ಜವಾಬ್ದಾರಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡುವ ಮೂಲಕ ಜವಾಬ್ದಾರಿಯಿಂದ ವರ್ತಿಸುವಂತೆ ಪರೋಕ್ಷವಾಗಿ ಪ್ರತಿಪಕ್ಷಗಳಿಗೆ ಸೂಚನೆ ನೀಡಿದ್ದಾರೆ.
ನ.24ರಿಂದ ಸಂಸತ್ನ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಅಧಿವೇಶನಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, ಸರ್ಕಾರ ನಡೆಸುವ ಜವಾಬ್ದಾರಿಯನ್ನು ಜನ ನಮಗೆ ನೀಡಿದ್ದಾರೆ. ಆದರೆ ದೇಶ ಮುನ್ನಡೆಸುವ ಜವಾಬ್ದಾರಿ ಎಲ್ಲ ಸಂಸದರ ಮೇಲಿದೆ ಎಂದರು.
ಈ ತಂಪಾದ ವಾತಾವರಣದಲ್ಲಿ, ಕೂಲ್ ಆಗಿಯೇ ನಾವು ಸಾಕಷ್ಟು ಕೆಲಸ ಮಾಡಬೇಕಾಗಿದೆ. ಅಧಿವೇಶನ ಸುಗಮವಾಗಿ ನಡೆಯಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು. ಅಲ್ಲದೆ ಪ್ರತಿಪಕ್ಷಗಳು ಸಹ ಉತ್ತಮ ಚರ್ಚೆಗೆ ಅವಕಾಶ ನೀಡಲಿವೆ ಎಂಬ ವಿಶ್ವಾಸವಿದೆ ಎಂದರು.
ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆಯುತ್ತಿರುವ ಎರಡನೇ ಅಧಿವೇಶನ ಇದಾಗಿದ್ದು, ಚಳಿಗಾಲದ ಅಧಿವೇಶನವಾದರೂ ಸಂಸತ್ನಲ್ಲಿ ಬಿಸಿ ಬಿಸಿ ಚರ್ಚೆಗಳೇ ಹೆಚ್ಚು ನಡೆಯುವ ಸಾಧ್ಯತೆ ಇದೆ. ಪ್ರತಿಪಕ್ಷಗಳ ವಿರೋಧದ ನಡುವೆಯೂ ಸರ್ಕಾರ ಕೆಲವೊಂದು ಮಹತ್ವಾಕಾಂಕ್ಷಿ ಆರ್ಥಿಕ ಅಜೆಂಡಾಗಳನ್ನು ಪೂರ್ಣಗೊಳಿಸುವ ನಿರೀಕ್ಷೆಯಿದೆ.