ಬೆಂಗಳೂರು : ರಾಜ್ಯದಲ್ಲಿ ಗೌರವ ಯೋಜನೆಯಡಿ ಒಂದೂವರೆ ಲಕ್ಷ ಶೌಚಾಲಯ ಸಹಿತ ಸುಸಜ್ಜಿತ ಸಾರ್ವಜನಿಕ ಬಚ್ಚಲು ಮನೆ ನಿರ್ಮಾಣ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಸಿಡಿಎಲ್ ಸಂಸ್ಥೆ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ವಿಶ್ವ ಶೌಚಾಲಯ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ನೈರ್ಮಲ್ಯದ ಬಗ್ಗೆ ಮಾಧ್ಯಮ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಗೌರವ ಯೋಜನೆಯಡಿ ನಿರ್ಮಿಸಲು ಉದ್ದೇಶಿಸಿರುವ ಶೌಚಾಲಯ ಸಹಿತ ಬಚ್ಚಲು ಮನೆಯಲ್ಲಿ ನೀರು, ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾಗಿ ಡ್ರೆಸ್ಸಿಂಗ್ ಕೊಠಡಿ ಸೇರಿದಂತೆ ಎಲ್ಲ ಸೌಲಭ್ಯಗಳಿರುತ್ತವೆ. ಇವುಗಳ ನಿರ್ಮಾಣಕ್ಕೆ 20 ಲಕ್ಷದವರೆಗೆ ಅನುದಾನ ನೀಡಲಾಗುತ್ತದೆ ಎಂದು ತಿಳಿಸಿದರು.
2018ರ ವೇಳೆಗೆ ಬಯಲು ಬಹಿರ್ದೆಸೆ ಮುಕ್ತ ರಾಜ್ಯವನ್ನು ಮಾಡುವ ಗುರಿ ಹೊಂದಿದ್ದೇವೆ ಈ ವರ್ಷ 10 ಲಕ್ಷ ಶೌಚಾಲಯ ನಿರ್ಮಿಸುವ ಗುರಿ ಹೊಂದಿದ್ದೇವೆ. ಡಿಸೆಂಬರ್ ವೇಳೆಗೆ 9ಲಕ್ಷ ನಿರ್ಮಾಣ ಕಾರ್ಯ ಮುಗಿಯಲಿದೆ. ಈಗಾಗಲೇ 3.6 ಲಕ್ಷ ಶೌಚಾಲಯ ನಿರ್ಮಾಣ ಆಗಿದೆ. ರಾಜ್ಯಾದ್ಯಂತ 50 ಲಕ್ಷ ಶೌಚಾಲಯ ನಿರ್ಮಾಣ ಆಗಬೇಕಿದೆ. ಇತ್ತೀಚೆಗೆ ಶೌಚಾಲಯ ನಿರ್ಮಿಸಿಕೊಳ್ಳಲು ಜನರ ನಿರ್ಲಕ್ಷ್ಯ ಮನೋಭಾವ ದೂರವಾಗಿದೆ. ಅವರಲ್ಲಿ ಅರಿವು ಮೂಡಿದೆ. ಶೌಚಾಲಯ ನಿರ್ಮಿಸಿಕೊಳ್ಳಲು 12 ಸಾವಿರ ರೂ. ಸಹಾಯ ಧನ ನೀಡಲಾಗುತ್ತಿದೆ ಎಂದು ವಿವರಿಸಿದರು. 2015ರ ಆಗಸ್ಟ್ ವೇಳೆಗೆ 10 ಸಾವಿರ ಗ್ರಾಮಗಳನ್ನು ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳನ್ನಾಗಿ ಮಾಡುತ್ತೇವೆ. ಬರುವ ಜನವರಿ 26ರಂದು ಉಡುಪಿ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಘೋಷಿಸುತ್ತೇವೆ ಎಂದು ವಿವರಿಸಿದರು.
ಈಗಲೂ ಎಷ್ಟೋ ಹಳ್ಳಿಗಳಲ್ಲಿ ಎತ್ತಿನ ಗಾಡಿ ಸುತ್ತ ಬಟ್ಟೆ ಕಟ್ಟಿ ಹೆಣ್ಣು ಮಕ್ಕಳು ಸ್ನಾನ ಮಾಡುವ ರೂಢಿಯಿದೆ. ಇದು ಶೋಚನೀಯ. ಶೌಚಾಲಯಕ್ಕಿಂತಲೂ ಬಚ್ಚಲು ಮನೆ ನಿರ್ಮಾಣ ಅತ್ಯಗತ್ಯವಾಗಿದೆ. ಹಾಗಾಗಿ ಒಂದೂವರೆ ಲಕ್ಷ ಶೌಚಾಲಯ ಸಹಿತ ಬಚ್ಚಲುಮನೆಗಳನ್ನು ಗೌರವ ಯೋಜನೆಯಡಿ ನಿರ್ಮಿಸುವ ಉದ್ದೇಶ ನಮ್ಮದಾಗಿದೆ ಎಂದು ಎಚ್.ಕೆ.ಪಾಟೀಲ್ ತಿಳಿಸಿದರು.