ಬೆಂಗಳೂರು : 'ಕಂಬಳ' ಕ್ರೀಡೆ ನಿಷೇಧ ಮಾಡಲು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಬಗ್ಗೆ ಕಾನೂನು ತಜ್ನರೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಕಾನೂನು ಸಚಿವ ಟಿ.ಬಿ ಜಯಚಂದ್ರ ತಿಳಿಸಿದ್ದಾರೆ.
ಕಂಬಳ, ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಕ್ರೀಡೆಯಾಗಿದ್ದು, ಇದನ್ನು ನಿಷೇಧಿಸಿದರೆ ಸಾವಿರಾರು ಪ್ರವಾಸಿಗರಿಗೆ ನಷ್ಟ ಉಂಟಾಗಲಿದೆ. ಅಲ್ಲದೇ ಸಾಂಸ್ಕೃತಿಕ ದೃಷ್ಟಿಯಿಂದಲೂ ಕಂಬಳ ಆಚರಣೆ ನಿಷೇಧಿಸುವುದು ಸರಿಯಲ್ಲ ಎಂದು ಟಿ.ಬಿ. ಜಯಚಂದ್ರ ಅಭಿಪ್ರಾಯಪಟ್ಟಿದ್ದಾರೆ.
ಭಾರತೀಯ ಪ್ರಾಣಿ ಕ್ಷೇಮಾಭಿವೃದ್ಧಿ ಮಂಡಳಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಕೆಲವು ದಿನಗಳ ಹಿಂದೆ ತಮಿಳುನಾಡಿನ ಹೋರಿಗಳ ಸ್ಪರ್ಧೆಯಾದ ಜಲ್ಲಿಕಟ್ಟನ್ನು ನಿಷೇಧಿಸಿತ್ತು. ಇದೇ ತೀರ್ಪನ್ನು ಆಧಾರವಾಗಿಟ್ಟುಕೊಂಡು ದಕ್ಷಿಣ ಕನ್ನಡ ಜಿಲ್ಲೆ ಕಂಬಳವನ್ನು ನಿಷೇಧಿಸುವಂತೆ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕರಾವಳಿಯ ಜಾನಪದ ಕ್ರೀಡೆ ಕಂಬಳ ನಿಷೇಧಿಸಿರುವ ಕ್ರಮ ಉಡುಪಿಯಲ್ಲಿ ಚರ್ಚೆಗೆ ಕಾರಣವಾಗಿದೆ. ಉಡುಪಿ ಜಿಲ್ಲಾಡಳಿತ ನ.15ರಿಂದ ನಡೆಯಬೇಕಾಗಿದ್ದ ಎಲ್ಲಾ ಕಂಬಳಿಗೆ ನಿಷೇಧ ಹೇರಲಾಗಿದೆ. ಕೆಲವು ದಿನಗಳ ಹಿಂದೆ ಉಡುಪಿ ಜಿಲ್ಲಾಧಿಕಾರಿ ಕಂಬಳ ಸಮಿತಿಯವರನ್ನು ಕರೆದು ಕಂಬಳದಲ್ಲಿ ನಡೆಯುವ ಪ್ರಾಣಿ ಹಿಂಸೆ ಬಗ್ಗೆ ಚರ್ಚೆ ನಡೆಸಿದ್ದರು.
ನ.2ರಂದು ಕಾರ್ಕಳ ಮಿಯಾರಿನಲ್ಲಿ ಪ್ರಾಯೋಗಿಕವಾಗಿ ಕಂಬಳವನ್ನು ನಡೆಸಿ, ಅದರ ಚಿತ್ರವನ್ನು ಉಡುಪಿ ಜಿಲ್ಲಾಧಿಕಾರಿಗಳಿಗೆ ನೀಡಲಾಗಿತ್ತು. ಆಗ ಜಿಲ್ಲಾಧಿಕಾರಿಗಳು ಕಂಬಳ ನಡೆಸಲು ಯಾವುದೇ ತೊಂದರೆ ಇಲ್ಲಾ ಎಂದು ಹೇಳಿದ್ದರು. ಆದರೆ, ಈಗ ನಿಷೇಧದ ಆದೇಶ ಹೊರಬಿದ್ದಿದೆ.
ಕಂಬಳ ಒಂದು ಜನಪದ ಕ್ರೀಡೆಯಾಗಿದ್ದು, ಅದು ಹಿಂಸಾತ್ಮಕವಾಗಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿಯವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಕರಾವಳಿಯ ಸಚಿವರು, ಗಣ್ಯರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಕರಾವಳಿ ಕಂಬಳ ಸಮಿತಿಗಳ ಒಕ್ಕೂಟದ ಅಧ್ಯಕ್ಷ ಭಾಸ್ಕರ ಸುಬ್ಬಯ್ಯ ಹೇಳಿದ್ದಾರೆ.