ಬೆಂಗಳೂರು : ಕಾಂಗ್ರೆಸ್ ಸ್ತ್ರೀ ಪೀಡಕ ಪಕ್ಷ, ಅಲ್ಲಿ ಮಹಿಳೆಯರಿಗೆ ಕಿರುಕುಳ ನೀಡಲಾಗುತ್ತದೆ ಎಂದು ಮಾಜಿ ಸಂಸದೆ, ಬಿಜೆಪಿ ನಾಯಕಿ ತೇಜಸ್ವಿನಿ ಗೌಡ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿರುವ ಮಾಜಿ ಸಂಸದೆ, ಪುರುಷ ರಾಜಕಾರಣಿಗಳನ್ನು ಹೊಗಳಿದರೆ ಮಾತ್ರ ಮಹಿಳೆಯರಿಗೆ ಸ್ಥಾನಮಾನ ನೀಡುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ ಎಂದು ಟೀಕಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ಸೋನಿಯಾ ಗಾಂಧಿ ನಿವಾಸದ ಎದುರು ಪ್ರತಿಭಟನೆ ನಡೆಸಬೇಕಾಯಿತು. ಇದು ಮಹಿಳೆಯರಿಗೆ ಕಾಂಗ್ರೆಸ್ ನಲ್ಲಿ ಕೊಡುವ ಗೌರವ ಎಂದು ವಾಗ್ದಾಳಿ ನಡೆಸಿದ್ದಾರೆ.
ಪುರುಷ ಪ್ರಧಾನವಾಗಿರುವ ಕಾಂಗ್ರೆಸ್ ನಲ್ಲಿ ಮಹಿಳೆಯರಿಗೆ ಭವಿಷ್ಯವಿಲ್ಲ. ಉಮಾಶ್ರೀ ಅವರಿಗೆ ಮಾತ್ರ ಸಚಿವೆ ಸ್ಥಾನ ನೀಡಲಾಗಿದ್ದು, ಹಿರಿಯ ಕಾಂಗ್ರೆಸ್ಸಿಗರಾದ ಮೋಟಮ್ಮ, ರಾಣಿ ಸತೀಶ್ ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ಕಾಂಗ್ರೆಸ್ ರೌಡಿಗಳ ಪಕ್ಷ ಅಂತ ಆರೋಪಿಸಿರುವ ತೇಜಸ್ವಿನಿ ಗೌಡ, ಹೆಣ್ಣು ಮಕ್ಕಳು ಕಾಂಗ್ರೆಸ್ ಸೇರುವುದಕ್ಕೆ ಮೊದಲು ಎಚ್ಚರಿಕೆ ವಹಿಸಿ ಎಂದು ಕರೆ ನೀಡಿದ್ದಾರೆ.
ಇದಕ್ಕೂ ಮುನ್ನ ಉಮಾಶ್ರೀ ಅವರು ತೇಜಸ್ವಿನಿ ಅವರ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್ ಪಕ್ಷದ ಮೂಲಕ ಮಾಜಿ ಪ್ರಧಾನಿಯನ್ನು ಸೋಲಿಸಿ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡವರು ಇಂದು ಪಕ್ಷದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ಉಮಾಶ್ರೀ ಅವರಿಗೆ ಟಾಂಗ್ ನೀಡಿರುವ ತೇಜಸ್ವಿನಿ ಗೌಡ, ಉಮಾಶ್ರೀಯವರನ್ನು ನಾನು ಸ್ಟಾರ್ ಅಂದುಕೊಂಡಿರಲಿಲ್ಲ ಬದಲಾಗಿ ಓರ್ವ ಕಲಾವಿದೆ ಅಂದುಕೊಂಡಿದ್ದೆ ಎಂದಿದ್ದಾರೆ.