ಬೆಂಗಳೂರು : ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ಬಿಜೆಪಿ ವಕ್ತಾರೆ ತೇಜಸ್ವಿನಿ ಗೌಡ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ ತರಾಟೆಗೆ ತೆಗೆದುಕೊಂಡಿದ್ದಾರೆ. ಭಾರತೀಯ ಜನತಾ ಪಕ್ಷ ಒಂದು ಶಿಸ್ತಿನ ಪಕ್ಷ. ಕಾಂಗ್ರೆಸ್ ಸಂಸ್ಕೃತಿಯನ್ನು ಇಲ್ಲಿ ಪ್ರದರ್ಶಿಸಬೇಡಿ. ನೀವೂ ಕೂಡ ಕಾಂಗ್ರೆಸ್ ಪಕ್ಷದಲ್ಲಿ ಇದ್ದು ಬಂದವರು. ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ತಾಕೀತು ಮಾಡಿದ್ದಾರೆ.
ಕಾಂಗ್ರೆಸ್ ವಿರುದ್ಧ ಅಶ್ಲೀಲ ಹೇಳಿಕೆಗಳನ್ನು ನೀಡುವುದರಿಂದ ಬಿಜೆಪಿಗೆ ಮುಜುಗರವಾಗಲಿದೆ. ಮಾಧ್ಯಮಗಳ ಎದುರು ಮಾತನಾಡುವ ಮೊದಲು ಪಕ್ಷದ ನಾಯಕರ ಜತೆ ಚರ್ಚೆ ನಡೆಸುವಂತೆ ಜೋಷಿ ಸೂಚಿಸಿದ್ದಾರೆ. ಈ ಮೂಲಕ ಕೆ.ಎಸ್.ಈಶ್ವರಪ್ಪ ಅವರಿಗೂ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಓರ್ವ ಸಚಿವೆಯಾಗಿರುವ ಉಮಾಶ್ರೀಯವರನ್ನು ಗೌರವದಿಂದ ಕಾಣಬೆಕು. ಈ ರೀತಿ ಹೇಳಿಕೆಗಳನ್ನು ನೀಡುವುದರಿಂದ ಬಿಜೆಪಿ ಗೌರವಕ್ಕೆ ಧಕ್ಕೆಯಾಗುತ್ತದೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದ ತೇಜಸ್ವಿನಿ ಗೌಡ, ಕಾಂಗ್ರೆಸ್ ಮಹಿಳಾ ಪೀಡಕರ ಪಕ್ಷ. ಅಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲ ಎಂದಿದ್ದರು. ಅಲ್ಲದೆ ಸಚಿವೆ ಉಮಾಶ್ರೀಯವರನ್ನು ಕೂಡ ಟೀಕಿಸಿದ್ದರು. ಬಹಿರಂಗ ಚರ್ಚೆಗೂ ಸಿದ್ಧರಿರುವುದಾಗಿ ಸವಾಲು ಹಾಕಿದ್ದರು. ಇದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.