ನವದೆಹಲಿ : 2021ರ ವೇಳೆಗೆ ಪ್ರಥಮ ಬಾರಿಗೆ ಮಾನವ ಸಹಿತ ಬಾಹ್ಯಾಕಾಶ ಯಾನ ನಡೆಸಲು ಉದ್ದೇಶಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಡಾ.ಕೆ ರಾಧಾಕೃಷ್ಣನ್ ಅವರು ಹೇಳಿದ್ದಾರೆ.
ಮೂವರು ಜನರನ್ನೊಳಗೊಂಡ ತಂಡದ ಮೂಲಕ ಬಾಹ್ಯಾಕಾಶ ಯಾನ ಕೈಗೊಳ್ಳಲು ನಿರ್ಧರಿಸಲಾಗಿದ್ದು, ಜಿ.ಎಸ್.ಎಲ್.ವಿ ಎಂ.ಕೆ.-3 ರಾಕೆಟ್ ಉಡಾವಣೆ ನಂತರ ಮಾನವ ಸಹಿತ ಬಾಹ್ಯಾಕಾಶ ಯಾನದ ಮಾದರಿಯನ್ನು ಪರೀಕ್ಷೆಗೊಳಪಡಿಸಲಾಗುವುದು ಎಂದು ರಾಧಾಕೃಷ್ಣನ್ ತಿಳಿಸಿದ್ದಾರೆ.
ಮಂಗಳಯಾನದ ತಂಡದೊಂದಿಗೆ ಎನ್.ಡಿ.ಟಿ.ವಿ ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಇಸ್ರೋ ಮುಖ್ಯಸ್ಥ, ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಈಗಾಗಲೇ ಯೋಜನೆ ರೂಪುಗೊಳಿಸಿದ್ದು ಈ ಸಂಬಂಧ ಶೀಘ್ರವೇ ಪ್ರಯೋಗ ನಡೆಸಲಾಗುವುದು ಎಂದು ಹೇಳಿದ್ದಾರೆ.
ಮಂಗಳ ಗ್ರಹದ ಕಕ್ಷೆಯಲ್ಲಿರುವ ಇಸ್ರೋದ ಬಾಹ್ಯಾಕಾಶ ನೌಕೆ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನೌಕೆ ಕಳಿಸುವ ಮಾಹಿತಿ ನಿರೀಕ್ಷೆಯಲ್ಲಿರುವ ವಿಜ್ನಾನಿಗಳು 2-3 ತಿಂಗಳಲ್ಲಿ ಅತ್ಯಾಕರ್ಷಕ ಹೊಸ ಸಂಶೋಧನೆಗಳನ್ನು ಬಹಿರಂಗಗೊಳಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಇಸ್ರೋ ಮಂಗಳಯಾನದ ತಂಡ ಇದೇ ಪ್ರಥಮ ಬಾರಿಗೆ ಟಿ.ವಿ ಚಾನೆಲ್ ವೊಂದರಲ್ಲಿ ಒಟ್ಟಿಗೆ ಪಾಲ್ಗೊಂಡಿದೆ.