ಜಮ್ಮು-ಕಾಶ್ಮೀರ : 'ಜಮ್ಮು-ಕಾಶ್ಮೀರ'ಕ್ಕೆ ಸ್ವಾಯತ್ತತೆ ನೀಡುವ ಸಂವಿಧಾನದ 370ನೇ ವಿಧಿ ಬಿಜೆಪಿಯ ಪ್ರಣಾಳಿಕೆಯ ವಿಷಯವಾಗಿದ್ದು ಅದರ ಬಗ್ಗೆ ಬಿಜೆಪಿ ಸ್ಪಷ್ಟ ನಿಲುವು ಹೊಂದಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.
370ನೇ ವಿಧಿಯೂ ಸೇರಿದಂತೆ ಇಷ್ಟು ವರ್ಷಗಳ ಕಾಲ ಬಿಜೆಪಿಯ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿರುವ ಅಂಶಗಳು ಕಾರ್ಯಸೂಚಿಯಾಗಿರಲಿವೆ ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ. ಜಮ್ಮು-ಕಾಶ್ಮೀರ ಚುನಾವಣೆ ಹಿನ್ನೆಲೆಯಲ್ಲಿ ಜಮ್ಮುವಿನಲ್ಲಿ ಬಿಜೆಪಿ ಮಾಧ್ಯಮ ಕೇಂದ್ರ ಉದ್ಘಾಟನೆ ಮಾಡಿ ಮಾತನಾಡಿದ ಸಚಿವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದು ಬಿಜೆಪಿ 370ನೇ ವಿಧಿ ವಿಷಯವನ್ನು ಮರೆತಿಲ್ಲ ಎಂದು ಹೇಳಿದ್ದಾರೆ.
ಪ್ರತಿ ಚುನಾವಣೆಯಲ್ಲಿಯೂ ಆದ್ಯತೆಯ ಆಧಾರದಲ್ಲಿ ವಿಷಯಗಳನ್ನು ಪರಿಗಣಿಸಲಾಗುತ್ತದೆ. ಅಂತೆಯೇ ಈ ಬಾರಿಯ ಚುನಾವಣೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಬೇರೂರಿರುವ ವಂಶಾಡಳಿತವನ್ನು ಕಿತ್ತೊಗೆಯಬೇಕೆಂಬುದು ಬಿಜೆಪಿಯ ಆದ್ಯತೆ ಎಂದು ಸಿಂಗ್ ತಿಳಿಸಿದ್ದಾರೆ.
ಜಮ್ಮು-ಕಾಶ್ಮೀರದ ಚುನಾವಣೆಯನ್ನು ಗೆಲ್ಲಲು ಬಿಜೆಪಿ ಮೋದಿ ಜನಪ್ರಿಯತಯ ಮೇಲೆ ಮಾತ್ರ ಅವಲಂಬಿತವಾಗಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಜಿತೇಂದ್ರ ಸಿಂಗ್, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅತ್ಯುತ್ತಮ ನಾಯಕ ಎಂದು ಪಕ್ಷಾತೀತವಾದ ಅಭಿಪ್ರಾಯ ವ್ಯಕ್ತವಾಗುತ್ತಿದೆ. ದೇಶದ ಜನತೆ ಬುದ್ಧಿವಂತರಾಗಿದ್ದು, ಬಿಜೆಪಿಯ ಆಡಳಿತವೈಖರಿಯನ್ನು ಗುರುತಿಸಿ ಮತ ನೀಡಲಿದ್ದಾರೆ ಎಂದು ಹೇಳಿದ್ದಾರೆ.
ಚುನಾವಣೆಗಳಲ್ಲಿ ತಂತ್ರಜ್ನಾನವನ್ನು ಬಳಸಿಕೊಂಡು ಪ್ರಚಾರ ಕೈಳ್ಳುವುದನ್ನು ಪರಿಚಯಿಸಿದ್ದೇ ಬಿಜೆಪಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ತಂತ್ರಜ್ನಾನವನ್ನು ಸಮರ್ಥವಾಗಿ ಬಳಸಿಕೊಂಡಿದೆ. ಜಮ್ಮು-ಕಾಶ್ಮೀರದಲ್ಲೂ ಮಿಷನ್ 44+ ಯಶಸ್ವಿಗೊಳಿಸಲು ಇದೇ ಮಾದರಿ ಅನುಸರಿಸುತ್ತೇವೆ ಎಂದು ಸಿಂಗ್ ತಿಳಿಸಿದ್ದಾರೆ.