ಬೆಂಗಳೂರು : ನೈಸ್ ಕಂಪನಿ ಅಕ್ರಮದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಭಾಗಿಯಾಗಿದ್ದಾರೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್, ನೈಸ್ ಕಂಪನಿಯ ಬಿಎಂಐಸಿ ಯೋಜನೆಗೆ ಭೂಮಿ ಮಂಜೂರು ಸಮಿತಿ ಅಧ್ಯಕ್ಷರಾಗಿದ್ದರು. ಈ ವೇಳೆ ರೈತರ ಭೂಮಿಯನ್ನು ನೈಸ್ ಕಂಪನಿಗೆ ಅಕ್ರಮವಾಗಿ ನೀಡುವ ಮೂಲಕ ಶಿವಕುಮಾರ್ ಭಾಗಿಯಾಗಿದ್ದಾರೆ ಎಂದರು.
ಶಿವಕುಮಾರ್ ಅಕ್ರಮಗಳ ಕುರಿತು ಜಂಟಿ ಸದನ ಸಮಿತಿ ರಚನೆ ಮಾಡಿ ತನಿಖೆ ನಡೆಸಬೇಕು. ನೈಸ್ ಅಕ್ರಮದಲ್ಲಿ ಡಿ.ಕೆ.ಶಿ ಪಾತ್ರದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.
ಅಲ್ಲದೇ ಕಾಂಗ್ರೆಸ್ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವುದು ನಿಜವೇ ಆದಲ್ಲಿ ಮೊದಲು ಡಿ.ಕೆ.ಶಿವಕುಮಾರ್ ಅಕ್ರಮಗಳನ್ನು ಬಯಲಿಗೆಳೆಯಲಿ. ಬಳಿಕ ಜೆಡಿಎಸ್ ಒಡೆಯುವ ತಂತ್ರ ಮಾಡಲಿ ಎಂದು ಗೌಡರು ಸವಾಲು ಹಾಕಿದ್ದಾರೆ.
ಇದೇ ವೇಳೆ ಜೆಡಿಎಸ್ ನಲ್ಲಿ ಯಾವುದೇ ರೀತಿಯ ಭಿನ್ನಮತವಿಲ್ಲ, ದೇವೇಗೌಡರು ಇರುವವರೆಗೂ ಅದು ಅಸಾಧ್ಯ ಎಂದು ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ.
ನನಗೆ ದೇವರ ಕೃಪೆಯಿದೆ. ಜೆಡಿಎಸ್ ಒದೆಯಲು ಬಿಡುವುದಿಲ್ಲ. ಈ ಪಕ್ಷದಲ್ಲಿ ಭವಿಷ್ಯವಿಲ್ಲ ಎಂದು ಬೇರೆ ಕಡೆ ಹೋಗುವವರು ಹೋಗಬಹುದು. ನಾನು ಯಾರನ್ನೂ ಹಿಡಿದಿಟ್ಟುಕೊಂಡಿಲ್ಲ. ಆದರೆ, ಪಕ್ಷವನ್ನು ಮಾತ್ರ ಹಾಳಾಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನು ತೂಕಡಿಸುವ ರಾಜಕಾರಣಿಯಲ್ಲ, ದಿನದ 20 ಗಂಟೆಗಳ ಕಾಲ ಕೆಲಸ ಮಾಡುತ್ತೆನೆ. ರಾಜ್ಯಾದ್ಯಂತ ಪ್ರವಾಸ ಕೈಗೊಂಡು, ಪಕ್ಷ ಸಂಘಟನೆ ಮಾಡಲಾಗುವುದು ಎಂದರು.
ಇದೇ ವೇಳೆ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ದೇವೇಗೌಡರು, ದೇಶದಲ್ಲಿ ಇಂದು ಅಘೋಷಿತ ತುರ್ತು ಪರಿಸ್ಥಿತಿಯಿದೆ. ಬಿಜೆಪಿ ಸರ್ಕಾರದಿಂದ ಸರ್ವಾಧಿಕಾರಿ ಧೋರಣೆ ಅನುಸರಿಸಲಾಗುತ್ತಿದೆ. ಇಂದು ಸಿಬಿಐ ಕೇಂದ್ರ ಬಿಜೆಪಿ ಸರ್ಕಾರದ ಕೈಲಿದೆ ಎಂದು ಕಿಡಿಕಾರಿದರು.