ನವದೆಹಲಿ : ಕೇಂದ್ರ ಸಚಿವ ಸಂಪುಟ ವಿಸ್ತರಣೆ ಮಾಡಿದ ಬಳಿಕ ತಡರಾತ್ರಿ ಪ್ರಧಾನಿ ನರೇಂದ್ರ ಮೋದಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಇದರ ಜತೆ ಹಲವಾರು ಪ್ರಮುಖ ಸಚಿವರ ಖಾತೆಗಳನ್ನು ಬದಲಾವಣೆ ಮಾಡಿದ್ದಾರೆ.
ರೈಲ್ವೆ ಖಾತೆಯನ್ನು ನಿರ್ವಹಿಸುತ್ತಿದ್ದ ಡಿ.ವಿ.ಸದಾನಂದಗೌಡ ಅವರ ಖಾತೆ ಬದಲಾವಣೆ ಮಾಡಲಾಗಿದ್ದು, ನಿರೀಕ್ಷೆಯಂತೆ ಸುರೇಶ್ ಪ್ರಭು ಅವರಿಗೆ ನೀಡಲಾಗಿದೆ. ಸದಾನಂದಗೌಡ ಅವರಿಗೆ ಟೆಲಿಕಾಂ ಸಚಿವ ರವಿಶಂಕರ ಪ್ರಸಾದ್ ಹೊಂದಿದ್ದ ಹೆಚ್ಚುವರಿ ಖಾತೆಯಾದ ಕಾನೂನು ಸಚಿವಾಲಯವನ್ನು ನೀಡಲಾಗಿದೆ.
ವಿತ್ತ ಮತ್ತು ಕಂಪನಿ ವ್ಯವಹಾರಗಳ ಸಚಿವ ಅರುಣ್ ಜೇಟ್ಲಿ ಹೊಂದಿದ್ದ ರಕ್ಷಣಾ ಖಾತೆಯನ್ನು ಮನೋಹರ ಪರ್ರಿಕರ್ ಅವರಿಗೆ ನೀಡಲಾಗಿದೆ. ಜೇಟ್ಲಿ ಅವರಿಗೆ ಪ್ರಕಾಶ ಜಾವಡೇಕರ್ ಹೊಂದಿದ್ದ ವಾರ್ತಾ ಖಾತೆ ರಾಜ್ಯ ಸಚಿವ ಖಾತೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಜಾವಡೇಕರ್ ಅವರನ್ನು ಈಗ ಪರಿಸರ ಖಾತೆಯಲ್ಲಿ (ಸ್ವತಂತ್ರ ನಿರ್ವಹಣೆ) ಮುಂದುವರಿಸಲಾಗಿದೆ.
ಇನ್ನು ನಿತಿನ್ ಗಡ್ಕರಿ ಹೆಚ್ಚುವರಿಯಾಗಿ ಹೊಂದಿದ್ದ ಗ್ರಾಮೀಣಾಭಿವೃದ್ಧಿ ಖಾತೆ ಬೀರೇಂದರ್ ಸಿಂಗ್ ಪಾಲಾಗಿದೆ. ಮಹತ್ವದ ಆರೋಗ್ಯ ಖಾತೆಯನ್ನು ಡಾ|ಹರ್ಷವರ್ಧನ ಅವರಿಂದ ಜಗತ್ಪ್ರಕಾಶ ನಡ್ಡಾ ಅವರಿಗೆ ನೀಡಲಾಗಿದೆ. ಹರ್ಷವರ್ಧನ ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ವಹಿಸಲಾಗಿದೆ. ಮುಂಬರುವ ದಿಲ್ಲಿ ಚುನಾವಣೆಯಲ್ಲಿ ಹರ್ಷವರ್ಧನ ಅವರಿಗೆ ಹೆಚ್ಚು ಕೆಲಸವಿರುವ ಕಾರಣ ಈ ಖಾತೆ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.
ಜಯಂತ ಸಿನ್ಹಾ ಅವರಿಗೆ ವಿತ್ತ ಖಾತೆ ರಾಜ್ಯ ಸಚಿವಗಿರಿ ನೀಡಲಾಗಿದ್ದರೆ, ರಾಜ್ಯವರ್ಧನ ರಾಥೋಡ್ ಅವರನ್ನು ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರನ್ನಾಗಿಸಲಾಗಿದೆ. ಕೌಶಲ್ಯಾಭಿವೃದ್ಧಿ (ಸ್ವತಂತ್ರ ನಿರ್ವಹಣೆ) ಖಾತೆ ರಾಜೀವ್ಪ್ರತಾಪ್ ರೂಡಿ ಪಾಲಾಗಿದೆ. ಬಂಡಾರು ದತ್ತಾತ್ರೇಯ ಅವರಿಗೆ ಕಾರ್ಮಿಕ ಖಾತೆ (ಸ್ವತಂತ್ರ ನಿರ್ವಹಣೆ), ಡಾ| ಮಹೇಶ್ ಶರ್ಮ ಅವರಿಗೆ ಸಂಸ್ಕೃತಿ, ಪ್ರವಾಸೋದ್ಯಮ, ನಾಗರಿಕ ವಿಮಾನಯಾನ (ಸ್ವತಂತ್ರ ನಿರ್ವಹಣೆ) ಖಾತೆ ಕೊಡಲಾಗಿದೆ. ಮುಖ್ತಾರ್ ಅಬ್ಟಾಸ್ ನಖ್ವಿಯವರನ್ನು ಅಲ್ಪಸಂಖ್ಯಾತ ಮತ್ತು ಸಂಸದೀಯ ಖಾತೆ ರಾಜ್ಯ ಸಚಿವರನ್ನಾಗಿ ಮಾಡಲಾಗಿದೆ.