ನವದೆಹಲಿ : ಕೇಂದ್ರ ಸಚಿವ ಸಂಪುಟ ಪುನಾರಚನೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಮಂತ್ರಿಗಳಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಈ ವೇಳೆ ಕೆಲ ಬದಲಾವಣೆಗಳನ್ನು ಮಾಡಲಾಗಿದೆ.
ಮಾನವ ಸಂಪನ್ಮೂಲ ಖಾತೆಯನ್ನು ಸಚಿವೆ ಸ್ಮತಿ ಇರಾನಿ ಅವರಿಂದ ಹಿಂಪಡೆದು ಸಂಪುಟ ದರ್ಜೆಗೆ ಭಡ್ತಿ ಹೊಂದಿದ ಪ್ರಕಾಶ್ ಜಾವಡೇಕರ್ ಅವರಿಗೆ ನೀಡಲಾಗಿದೆ. ಸ್ಮತಿ ಇರಾನಿಯವರಿಗೆ ಜವುಳಿ ಖಾತೆಯನ್ನು ನೀಡಲಾಗಿದೆ.
ಕಾನೂನು ಮಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡರ ಖಾತೆಯನ್ನು ನಿರೀಕ್ಷೆ ಯಂತೆ ವಾಪಸ್ ಪಡೆಯಲಾಗಿದ್ದು, ಯೋಜನಾ ಮತ್ತು ಸಾಂಖೀಕ ಸಚಿವ ಖಾತೆ ನೀಡಲಾಗಿದೆ. ಕಾನೂನು ಖಾತೆಯನ್ನು ಟೆಲಿಕಾಂ ಸಚಿವರಾದ ರವಿಶಂಕರ ಪ್ರಸಾದ್ ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ.
ಕರ್ನಾಟಕ ಕೋಟಾದಿಂದ ರಾಜ್ಯ ಮಂತ್ರಿಯಾಗಿ ಸೇರ್ಪಡೆಯಾದ ವಿಜಯ ಪುರ ಸಂಸದ ರಮೇಶ ಜಿಗಜಿಣಗಿ ಅವರಿಗೆ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ನೀಡಲಾಗಿದೆ.
ವಾರ್ತಾ ಖಾತೆಯನ್ನು ಹೆಚ್ಚುವರಿ ಯಾಗಿ ಇಟ್ಟುಕೊಂಡಿದ್ದ ವಿತ್ತಸಚಿವ ಅರುಣ್ ಜೇಟ್ಲಿ ಅವರ ಖಾತೆಯನ್ನು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರಿಗೆ ಹೆಚ್ಚುವರಿಯಾಗಿ ನೀಡಲಾಗಿದೆ. ಇನ್ನು ಸಂಸದೀಯ ಸಚಿವರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದ ವೆಂಕಯ್ಯ ನಾಯ್ಡು ಅವರ ಖಾತೆಯನ್ನು ರಸಗೊಬ್ಬರ ಸಚಿವ ಅನಂತ ಕುಮಾರ್ ಅವರಿಗೆ ನೀಡಲಾಗಿದೆ.
ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಎಂ.ಜೆ. ಅಕ್ಬರ್ ಅವರಿಗೆ ವಿದೇಶಾಂಗ ಖಾತೆ ನೀಡಲಾಗಿದೆ. ಜ.ವಿ.ಕೆ. ಸಿಂಗ್ ಅವರೂ ವಿದೇಶಾಂಗ ರಾಜ್ಯ ಸಚಿವರಾಗಿ ಮುಂದುವರಿಯಲಿದ್ದಾರೆ.
ವಿತ್ತ ಸಚಿವ ಅರುಣ್ ಜೇಟ್ಲಿ, ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವ ಮನೋಹರ ಪಾರೀಕರ್, ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್, ರೈಲ್ವೇ ಸಚಿವ ಸುರೇಶ್ ಪ್ರಭು ಅವರ ಸಂಪುಟ ಸ್ಥಾನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇದೇ ವೇಳೆ, 19 ನೂತನ ಸಚಿವರಿಗೂ ಖಾತೆ ಹಂಚಲಾಗಿದೆ.