ನವದೆಹಲಿ : ನ.9ರಂದು ಮಧ್ಯಾಹ್ನ 1ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಸಂಪುಟ ವಿಸ್ತರಣೆ- ಪುನಾರಚನೆಯಾಗಲಿದೆ. 10 ಹೊಸ ಮುಖಗಳು ಮೋದಿ ಮಂತ್ರಿಮಂಡಲ ಸೇರುವುದು ಬಹುತೇಕ ಖಚಿತವಾಗಿದೆ.
ರಾಷ್ಟ್ರಪತಿ ಭವನದ ದರ್ಬಾರ್ ಹಾಲ್ ನಲ್ಲಿ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಈಗಾಗಲೇ ಮೂವರು ಮಂತ್ರಿಗಳನ್ನು ಹೊಂದಿರುವ ಕರ್ನಾಟಕಕ್ಕೆ ಮತ್ತೂಂದು ಸಚಿವ ಸ್ಥಾನ ಸಿಗುವ ಸಾಧ್ಯತೆ ಕಡಿಮೆಯಿದೆ. ಆದರೆ ರೈಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರ ಖಾತೆಯಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ.
ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಕೇಂದ್ರ ಸಂಪುಟ ಸೇರುವುದು ಈಗಾಗಲೇ ಖಾತ್ರಿಯಾಗಿದ್ದು, ರಕ್ಷಣಾ ಖಾತೆ ನೀಡುವ ಸಂಭವವಿದೆ. ಇನ್ನು ಪಂಜಾಬ್ನ ಹೋಶಿಯಾರ್ಪುರದಿಂದ ಮೊದಲ ಬಾರಿಗೆ ಆಯ್ಕೆಯಾಗಿರುವ ವಿಜಯ್ ಸಂಪ್ಲಾಗೆ ಮಂತ್ರಿ ಸ್ಥಾನ ಲಭಿಸುವ ಸಾಧ್ಯತೆ ಇದೆ.
ಬಿಜೆಪಿ ನಾಯಕ ಮುಕ್ತಾರ್ ಅಬ್ಟಾಸ್ ನಖ್ವಿ, ಮಾಜಿ ಸಚಿವ ಯಶವಂತ ಸಿನ್ಹಾ ಪುತ್ರ ಜಯಂತ್ ಸಿನ್ಹಾ, ಹರ್ಯಾಣದ ಬೀರೇಂದರ್ ಸಿಂಗ್, ಬಿಹಾರದ ಗಿರಿರಾಜ್ ಸಿಂಗ್ ಅಥವಾ ಬೋಲಾ ಸಿಂಗ್, ರಾಜಸ್ಥಾನದ ಕರ್ನಲ್ ಸೋನಾರಾಮ್ ಚೌಧರಿ, ಅದೇ ರಾಜ್ಯದ ಗಜೇಂದ್ರ ಸಿಂಗ್, ಮಹಾರಾಷ್ಟ್ರದ ಹನ್ಸರಾಜ್ ಅಹಿರ್ ಅವರು ಮಂತ್ರಿಯಾಗುವ ಸಂಭವವಿದೆ.
ತೆಲುಗುದೇಶಂ ಹಾಗೂ ಶಿವಸೇನೆಗೂ ಕೆಲ ಸ್ಥಾನ ನೀಡಲು ಪ್ರಧಾನಿ ಮೋದಿ ನಿರ್ಧರಿಸಿದ್ದಾರೆ. ತೆಲುಗುದೇಶಂನಿಂದ ವೈ.ಎಸ್.ಚೌಧರಿ ಅಥವಾ ಮಾಜಿ ಸಚಿವ ದಿವಂಗತ ಯೆರ್ರನ್ ನಾಯ್ಡು ಪುತ್ರ ರಾಮ್ ಮೋಹನ್ ನಾಯ್ಡು ಅವರ ಪೈಕಿ ಒಬ್ಬರಿಗೆ, ಶಿವಸೇನೆಯಿಂದ ಅನಿಲ್ ದೇಸಾಯಿಗೆ ಸಚಿವ ಸ್ಥಾನ ಒಲಿಯುವ ಸಂಭವವಿದೆ.
ಪ್ರಸ್ತುತ ಕೇಂದ್ರ ಸಚಿವ ಸಂಪುಟದಲ್ಲಿ 45 ಮಂದಿ ಇದ್ದು, ಆ ಪೈಕಿ ಮೋದಿ ಸೇರಿದಂತೆ 23 ಸಂಪುಟ ದರ್ಜೆ, 22 ಮಂದಿ ರಾಜ್ಯ ದರ್ಜೆ ಖಾತೆಯವರಾಗಿದ್ದಾರೆ. ಅದರಲ್ಲಿ 10 ಮಂದಿಗೆ ಸ್ವತಂತ್ರ ನಿರ್ವಹಣೆ ನೀಡಲಾಗಿದೆ. ಆರಕ್ಕೂ ಹೆಚ್ಚು ಸಚಿವರು ಒಂದಕ್ಕಿಂತ ಹೆಚ್ಚು ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ.