ಬೆಂಗಳೂರು : ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ಮಾಡಲಾಗಿದೆ ಎಂದು ಆರೋಪಿಸಿದ್ದ ಬಿಜೆಪಿ ಮುಖಂಡರು, ಈಗ ಅರ್ಕಾವತಿ ಬಡಾವಣೆಯ ಅಕ್ರಮಗಳನ್ನು ದಾಖಲೆ ಸಮೇತ ಬಿಡುಗಡೆ ಮಾಡಿದ್ದಾರೆ.
ಮಾಜಿ ಸಚಿವ ಎಸ್.ಸುರೇಶ್ಕುಮಾರ್ ಹಾಗೂ ವಿ.ಸೋಮಣ್ಣ ನೇತೃತ್ವದ ಸತ್ಯಶೋಧನಾ ಸಮಿತಿಯ ಮಧ್ಯಂತರ ವರದಿಯಲ್ಲಿ ಅರ್ಕಾವತಿ ಬಡಾವಣೆಯ 'ರೀ ಡು' ಹೆಸರಲ್ಲಿ ಮಾಡಿರುವ ಅಕ್ರಮಗಳಿಗೆ ದಾಖಲೆ ಒದಗಿಸಲಾಗಿದೆ. ಹೈಕೋರ್ಟ್ ಮಾರ್ಗದರ್ಶನದಂತೆ ಕೇವಲ 140 ಎಕರೆ ಡಿನೋಟಿಫೈಗೆ ಅವಕಾಶವಿತ್ತು. ಆದರೆ ಸುಪ್ರೀಂ ಹಾಗೂ ಹೈಕೋರ್ಟ್ ಆದೇಶ ಉಲ್ಲಂಘಿಸಿ 707 ಎಕರೆಗಳನ್ನು 'ರೀ ಡು' ಮಾಡಲಾಗಿದೆ.
ಟಾಟಾ ಹೌಸಿಂಗ್, ತೇಜರಾತ್ ಗುಲೇಚಾ ಬಿಲ್ಡರ್ಗಳಿಗೆ ಭೂಮಿಯನ್ನು ನೀಡಲಾಗಿದೆ. ಇನ್ನೊಂದೆಡೆ ಸುಮಾರು 250 ಫಲಾನುಭವಿಗಳಿಗೆ ನಿವೇಶನವನ್ನು ಬಿಡಿಎ ನೀಡಿದೆ. ಕೆಲ ವರ್ಷಗಳಿಂದ ಅವರು ಕಂದಾಯ ತುಂಬುತ್ತಿದ್ದಾರೆ. ಆದಾಗ್ಯೂ ಅಂಥವರ ನಿವೇದಶನಗಳೂ 'ರೀ ಡು' ವ್ಯಾಪ್ತಿಗೆ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹಾಗೂ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ದಾಖಲೆ ಬಿಡುಗಡೆ ಮಾಡಿದರು.
ಬೆಂಗಳೂರಿಗರಿಗೆ ನಿವೇಶನ ಹಂಚಲು ನಿರ್ಮಿಸಿದ್ದ ಅರ್ಕಾವತಿ ಬಡಾವಣೆಯನ್ನು ಕಾಂಗ್ರೆಸ್ ಮುಖ್ಯಮಂತ್ರಿಗಳು ಹಂಚಿದ್ದಾರೆ. ಎಸ್.ಎಂ.ಕೃಷ್ಣ ಅವಧಿಯಲ್ಲಿ 1089 ಎಕರೆ ಡಿನೋಟಿಫೈ ಮಾಡಲಾಗಿದೆ. ಆಗಲೂ 2004ರ ವಿಧಾನಸಭೆ ಚುನಾವಣೆ ಎದುರಾಗಿತ್ತು ಈಗ ಲೋಕಸಭೆ ವೇಳೆ 707 ಎಕರೆ 'ರೀ ಡು' ಆಗಿದೆ. ಇದನ್ನು ಗಮನಿಸಿದಾಗ ಚುನಾವಣೆ ಹಾಗೂ ಡಿನೋಟಿಫಿಕೇಷನ್ಗೆ ಸಂಬಂಧವಿರುವುದು ಖಾತ್ರಿಯಾಗುತ್ತದೆ ಎಂದು ಸತ್ಯ ಶೋಧನಾ ಸಮಿತಿಯ ಜವಾಬ್ದಾರಿ ಹೊತ್ತಿದ್ದ ಮಾಜಿ ಸಚಿವ ವಿ.ಸೋಮಣ್ಣ ಆರೋಪಿಸಿದ್ದಾರೆ.
2006ರಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ನೀಡಿದ್ದ ಮಾರ್ಗದರ್ಶಿ ಸೂತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದುರುಪಯೋಗ ಪಡಿಸಿಕೊಂಡಿದೆ. ಕೋರ್ಟ್ ಆದೇಶದ ಪ್ರಕಾರ ಹಸಿರು ವಲಯ, ನಿರ್ಮಿತ ಪ್ರದೇಶ, ಧರ್ಮದರ್ಶಿ ಪ್ರತಿಷ್ಠಾನ, ನರ್ಸರಿ, ಕೈಗಾರಿಕೆಗಳ 149 ಎಕರೆ ಮಾತ್ರ ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಅವಕಾಶವಿತ್ತು. ಆದರೆ ಯಾವುದೇ ನಕ್ಷೆ ಪರಿಶೀಲಿಸದೆ ಹಾಗೂ ಸಮೀಕ್ಷೆ ಮಾಡದೇ ಏಕಾಏಕಿ 707 ಎಕರೆ 'ರೀ ಡು' ಮಾಡಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿತು. ಇದಕ್ಕೆ ಯಾವುದೇ ಕಾನೂನು ಮಾನ್ಯತೆಯಿಲ್ಲ ಹಾಗೂ ಬಿಡಿಎ ಹೊರತುಪಡಿಸಿ ಉಳಿದೆಲ್ಲ ಇಲಾಖೆ ಅಧಿಕಾರಿಗಳು ವಿರೋಧಿಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಬೋಂಡು ರಾಮಸ್ವಾಮಿ ಹಾಗೂ ಬಿಡಿಎ ನಡುವಿನ ಕಾನೂನು ಹೋರಾಟದ ಸಂದರ್ಭದಲ್ಲಿ ಹೈಕೋರ್ಟ್ಗೆ 2010ರಲ್ಲಿ ಬೆಂಗಳೂರು ಅಭಿವೃಧ್ಧಿ ಪ್ರಾಧಿಕಾರ ಪ್ರಮಾಣಪತ್ರ ಸಲ್ಲಿಸಿತ್ತು. ಕೆಂಪಾಪುರ ಹಾಗೂ ಶ್ರೀರಾಮಪುರ ಗ್ರಾಮಗಳನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಲು ಸಾಧ್ಯವಿಲ್ಲ ಎಂದು ಹೇಳಿತ್ತು.
ಆದರೆ ಇದೇ ಪ್ರದೇಶಗಳಲ್ಲಿ ಕೋರ್ಟ್ಗೆ ಪ್ರಕರಣ ಬರಬಹುದು ಎಂದು ಮೊದಲೇ ಆಲೋಚಿಸಿ ರಾಜ್ಯ ಸರ್ಕಾರ 'ರೀ ಡು' ಮಾಡಿದೆ. ಒಂದೇ ದಿನದಲ್ಲಿ 52 ರೈತರಿಂದ ಅರ್ಜಿ ಹಾಕಿಸಿಕೊಂಡು 54 ಎಕರೆ 7 ಗುಂಟೆ ಭೂಮಿಯನ್ನು ಅಕ್ರಮವಾಗಿ 'ರೀ ಡು' ಮಾಡಲಾಗಿದೆ. ಅಲ್ಲದೇ ರೈತರಿಗೆ ಇದಕ್ಕೂ ಮೊದಲೆ ಸರ್ಕಾರ ಪರಿಹಾರ ಧನ ವಿತರಿಸಿತ್ತು. ಕಾನೂನು ಪ್ರಕಾರ ಪರಿಹಾರ ಪಡೆದುಕೊಂಡ ಮೇಲೆ ಡಿನೋಟಿಫೈ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.