ಮುಂಬೈ : 'ಮಹಾರಾಷ್ಟ್ರ' ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸ್ವಂತ ನಿರ್ಧಾರ ಕೈಗೊಂಡು ಸರ್ಕಾರ ನಡೆಸಲು ಸಾಧ್ಯವಾಗುವುದಿಲ್ಲ, ಅವರೂ ಕಾಂಗ್ರೆಸ್ ನಾಯಕರಂತೆಯೇ ಹೈಕಮಾಂಡ್ ಒತ್ತಡಕ್ಕೊಳಗಾಗಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕ ನಾರಾಯಣ್ ರಾಣೆ ಹೇಳಿದ್ದಾರೆ.
ಆಡಾಳಿತದಲ್ಲಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಿಗೂ ಸ್ವಂತ ನಿರ್ಧಾರ ಕೈಗೊಳ್ಳದಂತೆ ಹೈಕಮಾಂಡ್ ಒತ್ತಡ ಹೇರುತ್ತಿತ್ತು. ಇದೇ ರೀತಿಯ ಒತ್ತಡ ಬಿಜೆಪಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೂ ಎದುರಿಸಬೇಕಾಗುತ್ತದೆ ಎಂದು ರಾಣೆ ಅಭಿಪ್ರಾಯಪಟ್ಟಿದ್ದಾರೆ.
ದೇವೇಂದ್ರ ಫಡ್ನವೀಸ್ ಅವರಿಗೆ ಆಡಳಿತ ಕೌಶಲ್ಯ ಇಲ್ಲ. ಅವರಿಗೆ ಸ್ವಂತ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವಿಲ್ಲ. ಪ್ರತಿ ನಿರ್ಧಾರಕ್ಕೆ ಹೈಕಮಾಂಡ್ ಸಲಹೆಗಾಗಿ ಕಾಯಬೇಕಾಗುತ್ತದೆ. ನಾವು ಎದುರಿಸಿದ ಕಠಿಣ ಸವಾಲುಗಳನ್ನೇ ನೂತನ ಮುಖ್ಯಮಂತ್ರಿಯೂ ಎದುರಿಸಬೇಕಾಗುತ್ತದೆ ಎಂದು ರಾಣೆ ಹೇಳಿದ್ದಾರೆ.
ಇತ್ತೀಚೆಗಷ್ಟೇ ನಡೆದ ಮಹಾರಾಷ್ಟ್ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೀನಾಯವಾದ ಸೋಲು ಉಂಟಾಗಿ, ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬಂದಿತ್ತು.