ಮುಂಬೈ : ಇತ್ತೀಚೆಗಷ್ಟೇ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮುಡ್ಖೇಡ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿ ಶಾಸಕ ಗೋವಿಂದ್ ರಾಥೋಡ್ ನಿಧನರಾಗಿದ್ದಾರೆ. ಓರ್ವ ಶಾಸಕನನ್ನು ಕಳೆದುಕೊಂಡಿರುವ ಬಿಜೆಪಿಯ ಸಂಖ್ಯಾಬಲ 121ಕ್ಕೆ ಇಳಿಕೆಯಾಗಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಸಮ್ಮಿಶ್ರ ಸರ್ಕಾರ ರಚನೆ ಮಾಡಲಿದ್ದು ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆ ನಡೆಯಲಿದೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿದ್ದ ವೇಳೆ ಗೋವಿಂದ್ ರಾಥೋಡ್ ಹೃದಯಾಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.
67 ವರ್ಷದ ರಾಥೋಡ್, ದೇವಗಿರಿ ಎಕ್ಸ್ ಪ್ರೆಸ್ ರೈಲಿನಲ್ಲಿ ಮುಂಬೈ ಗೆ ಆಗಮಿಸುತ್ತಿದ್ದರು. ರಾತ್ರಿ 10:30ರ ವೇಳೆಗೆ ಮಾರ್ಗ ಮಧ್ಯದಲ್ಲಿ ಎದೆನೋವು ಕಾಣಿಸಿಕೊಂಡಿದ್ದು ತೀವ್ರ ಹೃದಯಾಘಾತಕ್ಕೊಳಗಾಗಿದ್ದರು ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಗೋವಿಂದ್ ರಾಥೋಡ್ ಅವರ ನಿಧನದಿಂದ ದು:ಖ ಉಂಟಾಗಿದೆ ಎಂದು ಪಕ್ಷದ ವಕ್ತಾರ ಮಾಧವ್ ಭಂಡಾರಿ ತಿಳಿಸಿದ್ದಾರೆ. ಅ.15ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಮುಡ್ಖೇಡ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಗೋವಿಂದ್ ರಾಥೋಡ್ ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಅಭ್ಯರ್ಥಿ ಹೆಚ್.ಬಿ.ವಿ ಪಾಟೀಲ್ ಅವರನ್ನು 73,291 ಮತಗಳ ಅಂತರದಿಂದ ಸೋಲಿಸಿದ್ದರು. ಗೋವಿಂದ್ ರಾಥೋಡ್ ನಿಧನದಿಂದಾಗಿ ಬಿಜೆಪಿಗೆ ಸರ್ಕಾರ ರಚಿಸಲು ಇನ್ನೂ 23 ಶಾಸಕರ ಕೊರತೆ ಎದುರಾಗಿದೆ.