ಮುಂಬೈ : ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆ ಸೇರಿ ಸರ್ಕಾರ ರಚಿಸಲು ಸಿದ್ಧ ಎಂದಿರುವ ಶಿವಸೇನೆ, ಯಾರೇ ಮುಖ್ಯಮಂತ್ರಿಯಾದರೂ ಅವರಿಗೆ ಬೆಂಬಲ ನೀಡುವುದಾಗಿ ತಿಳಿಸಿದೆ.
ಶಿವಸೇನೆ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಹೇಳಿರುವ ಉದ್ಧವ್ ಠಾಕ್ರೆ, ಮಹಾರಾಷ್ಟ್ರದಲ್ಲಿನ ಬಿಜೆಪಿ ಗೆಲುವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಸಲ್ಲಿಸಿದ್ದಾರೆ.
ಗುಜರಾತಿಯಾಗಲಿ, ಸಿಂಧಿಯಾಗಲಿ, ಉತ್ತರ ಭಾರತೀಯನಾಗಿರಲಿ, ನಾವು ಯಾವಾಗಲೂ ಹಿಂದೂಗಳ ಒಟ್ಟಿಗೆ ನಿಂತಿದ್ದೇವೆ. ಹಿಂದೂಗಳಲ್ಲಿ ನಾವು ತಾರತಮ್ಯ ಮಾಡುವುದಿಲ್ಲ. ಆದರೆ ಸಮಾಜದ ಒಂದು ನಿರ್ಧಿಷ್ಟ ಭಾಗ ಅವರಿಗೆ ಮತ ಹಾಕಿದೆ. ಅದರ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದಲ್ಲಿ ನಿಜವಾದ ಸ್ಪರ್ಧೆ ಏರ್ಪಟ್ಟಿರುವುದು ನಿತಿನ್ ಗಡ್ಕರಿ ಹಾಗೂ ದೇವೇಂದ್ರ ಫಡ್ನವಿಸ್ ಮಧ್ಯೆ. ನಿತಿನ್ ಗಡ್ಕರಿ ಪಡ್ನವಿಸ್ ಗಿಂತಲೂ ಹೆಚ್ಚು ಅನುಭವಿ. ಆದರೆ ಅವರು ಕೇಂದ್ರದಲ್ಲಿ ಪ್ರಮುಖ ಖಾತೆ ನಿರ್ವಹಿಸುತ್ತಿರುವುದರಿಂದ ಅವರು ದೆಹಲಿಗೆ ಹೆಚ್ಚು ಅವಶ್ಯಕ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ ಜನರ ಆಶೀರ್ವಾದವಿರುವ ಬಿಜೆಪಿಯ ಯಾವುದೇ ವ್ಯಕ್ತಿ ಮುಖ್ಯಮಂತ್ರಿಯಾದರೂ ತಾವು ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ಮಹಾರಾಷ್ಟ್ರದ ಅಭಿವೃದ್ಧಿ ನಮಗೆ ಮುಖ್ಯ ಎಂದು ಉದ್ಧವ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ರಚನೆಯಾಗುವುದು ಬಹುತೇ ಖಚಿತವಾದತಾಗಿದ್ದು, ಅ.28ರಂದು ನಡೆಯಲಿರುವ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಹೊರಬೀಳಲಿದೆ. ಅಲ್ಲದೇ ಮುಖ್ಯಮಂತ್ರಿ ಅಭ್ಯರ್ಥಿ ಹೆಸರು ಕೂಡ ಸಭೆಯಲ್ಲಿ ಘೋಷಣೆಯಾಗಲಿದೆ.