ಚಂಡೀಗಢ : ಹರ್ಯಾಣದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಮನೋಹರ್ ಲಾಲ್ ಖಟ್ಟರ್ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಚಂಡಿಗಢದ ಪಾಂಚ್ಕುಲಾ ನಗರದ ಮೇಳ ಮೈದಾನದಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಹರಿಯಾಣದ ರಾಜ್ಯಪಾಲ ಕಪ್ತಾನ್ ಸಿಂಗ್ ಸೋಲಂಕಿ, ಮನೋಹರ್ ಲಾಲ್ ಖಟ್ಟರ್ ಅವರಿಗೆ ಪ್ರತಿಜ್ನಾವಿಧಿ ಭೋದಿಸಿದರು. ಖಟ್ಟರ್ ದೇವರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ,ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ,ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್, ಗೋವಾ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಹಾಗೂ ಹಲವು ಕೇಂದ್ರ ಸಚಿವರು ಭಾಗವಹಿಸಿದ್ದರು.
ಖಟ್ಟರ್ ಅವರೊಂದಿಗೆ ಸಂಪುಟದ ಸಚಿವರಾಗಿ ಕ್ಯಾಪ್ಟನ್ ಅಭಿಮನ್ಯು ಸಿಂಗ್, ಕವಿತಾ ಜೈನ್,ರಾವ್ ನರಬೀರ್ ಸಿಂಗ್ ,ಓಂ ಪ್ರಕಾಶ್ ಧನ್ಖಡ್,ರಾಮ್ ವಿಲಾಸ್ ಶರ್ಮಾ, ಅನಿಲ್ ವಿಜ್ ಅವರು ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.
ಇತ್ತೀಚೆಗೆ ನಡೆದ ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸ್ಫಷ್ಟ ಬಹುಮತಗಳಿಸಿತ್ತು. 90 ಸ್ಥಾನಗಳ ಪೈಕಿ 47 ಸ್ಥಾನಗಳನ್ನು ಗೆದ್ದ ಬಿಜೆಪಿ ಹರ್ಯಾಣದಲ್ಲಿ ಮೊದಲಬಾರಿ ಸರ್ಕಾರ ರಚನೆ ಮಾಡಿದೆ.