ನವದೆಹಲಿ : ಮಹಾರಾಷ್ಟ್ರ ಹಾಗೂ ಹರ್ಯಾಣ ಎರಡೂ ರಾಜ್ಯಗಳಲ್ಲೂ ಬಿಜೆಪಿ ಗೆಲುವು ಸಾಧಿಸಿದೆ. ಈ ಗೆಲುವು ಉಭಯ ರಾಜ್ಯಗಳ ಮತದಾರರಿಗೆ ಸೇರಿದ್ದು, ಎರಡೂ ರಾಜ್ಯಗಳ ಮತದಾರರನ್ನು ಅಭಿನಂದಿಸುವುದಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಾರಾಷ್ಟ್ರ ಹಾಗೂ ಹರ್ಯಾಣದಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದೆ. ಉಭಯ ರಾಜ್ಯಗಳಲ್ಲೂ ಕಾಂಗ್ರೆಸ್ ಧೂಳಿಪಟವಾಗಿದೆ. ಭಾರತ ಶೀಘ್ರದಲ್ಲಿಯೇ ಕಾಂಗ್ರೆಸ್ ಮುಕ್ತವಾಗಲಿದೆ ಎಂದರು.
ವಿಪಕ್ಷಗಳು ನರೇಂದ್ರ ಮೋದಿ ಅಲೆಯಿಲ್ಲ ಎನ್ನುತ್ತಿದ್ದರು. ಆದರೆ ಎರಡೂ ರಾಜ್ಯಗಳ ಚುನಾವಣಾ ಫಲಿತಾಂಶ ಅವರ ಟೀಕೆಗೆ ಉತ್ತರ ನೀಡಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ, ಸರ್ಕಾರ ರಚನೆ ಮಾಡಲಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಶೇ.28ರಷ್ಟು ಮತ್ತು ಹರ್ಯಾಣದಲ್ಲಿ ಶೇ. 33ರಷ್ಟು ಮತಗಳು ದೊರೆತಿವೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಏಕಾಂಗಿ ಸ್ಪರ್ಧಿಸಿತ್ತು. ನರೇಂದ್ರ ಮೋದಿ ಅವರ ಸರ್ಕಾರದ ಮೇಲೆ ನಂಬಿಕೆ ಇಟ್ಟು, ಎರಡೂ ರಾಜ್ಯಗಳ ಮತದಾರರು ಮತಹಾಕಿದ್ದಾರೆ. ಇದು ಮೋದಿ ಅಲೆಯ ಸಂಕೇತ ಎಂದರು.
ಚುನಾವಣೆಗೂ ಮುನ್ನ ನಾವು ನೀಡಿದ ಭರವಸೆಗಳನ್ನು ಮುಂದಿನ ನಾಲ್ಕು ತಿಂಗಳುಗಳಲ್ಲಿ ಯೋಜನೆಗಳನ್ನಾಗಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಚುನಾವಣೆಗೂ ಮುನ್ನ ಶಿವಸೇನೆಯೊಂದಿಗಿನ ಮೈತ್ರಿಯನ್ನು ನಾವು ಮುರಿದುಕೊಂಡಿಲ್ಲ, ಮೈತ್ರಿ ಮುರಿಯುವ ಯತ್ನವನ್ನೂ ನಡೆಸಿಲ್ಲ ಎಂದ ಅಮಿತ್ ಶಾ, ಸರ್ಕಾರ ರಚನೆ ಕುರಿತಂತೆ ಎನ್ಸಿಪಿ ಪಕ್ಷವೇ ಬಾಹ್ಯ ಬೆಂಬಲ ನೀಡುವ ಕುರಿತು ಹೇಳಿಕೆ ನೀಡಿತ್ತು. ಈ ಸಂಬಂಧ ಮಾತುಕತೆಯಾಗಿತ್ತೇ ಹೊರತು, ಶಿವಸೇನೆಯ ಮೈತ್ರಿ ಕಡಿಯುವ ಕುರಿತು ಮಾತುಕತೆ ನಡೆಸಿರಲಿಲ್ಲ. ಮಹಾರಾಷ್ಟ್ರ ಮತ್ತು ಹರ್ಯಾಣ ಎರಡೂ ರಾಜ್ಯಗಳಲ್ಲಿ ಯಾವುದೇ ಬಿಕ್ಕಟ್ಟಿಲ್ಲದೇ ಬಿಜೆಪಿ ಸರ್ಕಾರ ರಚನೆ ಮಾಡಲಿದೆ. ಸರ್ಕಾರ ರಚನೆ ಮತ್ತು ಮುಖ್ಯಮಂತ್ರಿ ಆಯ್ಕೆ ಕುರಿತ ಮುಂದಿನ ನಿರ್ಧಾರಗಳನ್ನು ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದರು.