ಬೆಂಗಳೂರು : ಒಟ್ಟು 5 ಲಕ್ಷ ಕೋಟಿ ರೂ ಬಂಡವಾಳ ಹೂಡಿಕೆ ಜತೆಗೆ ಸುಮಾರು 15 ಲಕ್ಷ ಜನರಿಗೆ ಉದ್ಯೋಗಾವಕಾಶ ಕಲ್ಪಿಸುವ ಗುರಿಯೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರದ ನೂತನ ಕೈಗಾರಿಕಾ ನೀತಿ ಬಿಡುಗಡೆಗೊಳಿಸಿದ್ದಾರೆ.
ಮುಂದಿನ ಐದು ವರ್ಷಗಳ ಅವಧಿಯಲ್ಲಿ ಅಸ್ತಿತ್ವದಲ್ಲಿರುವ ಈ ನೂತನ ನೀತಿಯು ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಹಾಗೂ ಉದ್ಯೋಗ ಸೃಷ್ಠಿಗೆ ಪೂರಕವಾಗಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯ ದೇಶೀಯ ಉತ್ಪನ್ನಕ್ಕೆ ಶೇಕಡಾ 5.5 ರಷ್ಟು ಕೊಡುಗೆ ನೀಡುವ ಮೂಲಕ ಕರ್ನಾಟಕ ರಾಜ್ಯವು ಭಾರತದಲ್ಲಿಯೇ ಏಳನೇ ಅತಿ ಹೆಚ್ಚಿನದೇಶೀಯ ಉತ್ಪನ್ನ ಹೊಂದಿರುವ ರಾಜ್ಯಗಳಲ್ಲೊಂದಾಗಿದೆ. ಕೈಗಾರೀಕರಣದ ಮೂಲಕ ತನ್ನ ಆರ್ಥಿಕತೆಯನ್ನು ಉತ್ತಮಪಡಿಸಿಕೊಂಡು ಕರ್ನಾಟಕವು ರಾಷ್ಟ್ರದ ದೇಶೀಯ ಉತ್ಪನ್ನಕ್ಕೆ ಇನ್ನೂ ಹೆಚ್ಚಿನ ಕೊಡುಗೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಬಡತನ ಮತ್ತು ನಿರುದ್ಯೋಗ ನಿವಾರಣೆಗೆ ಕೈಗಾರಿಕಾ ಬೆಳವಣಿಗೆಯು ಒಂದು ಉತ್ತಮ ಸಾಧನ ಎಂದು ರಾಜ್ಯ ಸರ್ಕಾರವು ಪರಿಗಣಿಸುತ್ತದೆ ಎಂದರು.
ಕೈಗಾರಿಕೆ, ವ್ಯಾಪಾರ ಮತ್ತು ಸೇವಾ ವಲಯಗಳು ತಮ್ಮ ಅಭಿವೃದ್ಧಿಯೊಂದಿಗೆ ಹೆಚ್ಚಿನ ಬಂಡವಾಳ ಹೂಡಿಕೆಯನ್ನು ಆಕರ್ಷಿಸುತ್ತವೆ, ತಲಾ ಆದಾಯವನ್ನು ಉತ್ತಮಪಡಿಸುತ್ತದೆ ಹಾಗೂ ಕಾರ್ಮಿಕರಿಗೆ ಉದ್ಯೋಗಾವಕಾಶಗಳನ್ನು ನಿರ್ಮಾಣ ಮಾಡುತ್ತವೆ. ಈ ವಾಸ್ತವತೆಯನ್ನು ಮನಗಾಣುತ್ತಾ, ಕೈಗಾರೀಕರಣ ಮತ್ತು ದೀರ್ಘ ಕಾಲ ಬೆಳವಣಿಗೆಯನ್ನು ಸುಸ್ತಿರಗೊಳಿಸುವ ನಿಟ್ಟಿನಲ್ಲಿ, ರಾಜ್ಯವನ್ನು ಹೊಸ ದಿಗಂತಕ್ಕೆ ಕೊಂಡೊಯ್ಯುವ ಗುರಿಯೊಂದಿಗೆ ಕರ್ನಾಟಕವು ಈ ಹಿಂದೆಯೂ ಹಲವು ಪ್ರಗತಿಪರ ಕೈಗಾರಿಕಾ ನೀತಿಗಳನ್ನು ಹೊರ ತಂದಿದೆ. ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಆರ್ಥಿಕ ಬದಲಾವಣೆ ಮತ್ತು ಉತ್ಪಾದನಾ ವಲಯಕ್ಕೆ ಹೆಚ್ಚಿನ ಒತ್ತು ನೀಡಿರುವ ಹಿನ್ನೆಲೆಯಲ್ಲಿ, ರಾಜ್ಯವು ಹೊಸ ಕೈಗಾರಿಕಾ ನೀತಿಯನ್ನು ಬಿಡುಗಡೆಮಾಡುತ್ತಿದ್ದೇವೆ ಎಂದು ತಿಳಿಸಿದರು.
ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳು ನಮ್ಮ ಆದ್ಯತೆ ಆಗಿದ್ದರೂ, ಕೈಗಾರಿಕೆಗಳ ಬಗ್ಗೆಯೂ ಅಷ್ಟೇ ಆಧ್ಯತೆ ನೀಡುತ್ತಿದ್ದೇವೆ. ಕೈಗಾರಿಕಾ ಬೆಳವಣಿಗೆ ಹೆಚ್ಚಿದಲ್ಲಿ, ಉತ್ಪಾದನೆ ಹೆಚ್ಚುತ್ತದೆ.ಇದರಿಂದ ಸಂಪತ್ತು ವೃದ್ಧಿಯಾಗುವುದಲ್ಲದೆ, ರಾಜ್ಯದ ಆರ್ಥಿಕ ಅಭಿವೃದ್ದಿಯೂ ಆಗುತ್ತದೆ ಎಂಬುದು ನಮ್ಮ ಸರ್ಕಾರದ ನಿಲುವಾಗಿದೆ. ಕರ್ನಾಟಕವನ್ನು ಮುಂಚೂಣಿ ರಾಜ್ಯವನ್ನಾಗಿ ಅಭಿವೃದ್ಧಿಪಡಿಸುವಲ್ಲಿ ಕೈಗಾರಿಕೋದ್ಯಮಿಗಳ ಪ್ರಾಮುಖ್ಯತೆ ಕುರಿತು ಗೌರವವಿದೆ ಎಂದರು.
ಈ ಇಲಾಖೆಯ ಅಧಿಕಾರವನ್ನು ನಾನು ವಹಿಸಿಕೊಂಡ ನಂತರ ಐದು ರಾಜ್ಯ ಮಟ್ಟದ ಉನ್ನತಾಧಿಕಾರ ಒಪ್ಪಿಗೆ ನೀಡಿಕೆ ಸಭೆಗಳನ್ನು ನಡೆಸಿ 50,000 ಕೋಟಿ ರೂ. ಗಳಿಗೂ ಹೆಚ್ಚು ಬಂಡವಾಳ ಹೂಡಿಕೆಯ ಪ್ರಸ್ತಾವನೆಗಳನ್ನು ಅನುಮೋದಿಸಲಾಗಿದೆ. ಮೆಗಾ ಕೈಗಾರಿಕೆಗಳಿಗೆ ಸಂಬಂಧಿಸಿದಂತೆ ಪ್ರೋತ್ಸಾಹ ಮತ್ತು ರಿಯಾಯಿತಿಗಳ ವಿಶೇಷ ಪ್ಯಾಕೇಜ್ನ್ನು ಪ್ರಕಟಿಸಲಾಗಿದೆ. ಅನುಮೋದಿತ ಯೋಜನೆಗಳ ಅನುಷ್ಟಾನಕ್ಕಾಗಿ ತಗಲುವ ಸಮಯವನ್ನು ಕಡಿಮೆಗೊಳಿಸುವಂತೆ ವ್ಯವಸ್ಥೆ ರೂಪಿಸಲು ಅಧಿಕಾರಿಗಳಿಗೆ ಆದೇಶಿಸಿಸಲಾಗಿದೆ ಎಂದರು.
ಪ್ರಜ್ಞಾಪೂರ್ವಕ ಪ್ರಯತ್ನಗಳಿಂದ ಬೆಂಗಳೂರಿನ ಆಚೆಗೂ ಹಾಗೂ ರಾಜ್ಯದ ಮೂಲೆ ಮೂಲೆಗಳಿಗೂ ಸಮತೋಲಿತ ಬೆಳವಣಿಗೆಯನ್ನು ಕೊಂಡೊಯ್ಯುವ ಗುರಿಯನ್ನು ಈ ಕೈಗಾರಿಕಾ ನೀತಿಯು ಹೊಂದಿರುತ್ತದೆ. ಅಲ್ಲದೆ, ಕೈಗಾರಿಕೆಗಳನ್ನು ಬಹುದಿನಗಳಿಂದ ಕಾಡುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗೋಪಾಯಗಳ ಬಗ್ಗೆ ಈ ನೀತಿಯು ಗಮನಹರಿಸುತ್ತದೆ.
ಎಲ್ಲಾ ಜನಸಮುದಾಯಗಳನ್ನು ಒಳಗೊಳ್ಳುವ, ಸುಸ್ಥಿರ ಮತ್ತು ಸಮತೋಲಿತ ಕೈಗಾರಿಕಾ ಬೆಳವಣಿಗೆಯ ಮೂಲಕ ಅತೀ ಹೆಚ್ಚಿನ ಉದ್ಯೋಗವಕಾಶಗಳನ್ನು ಸೃಷ್ಠಿಸಿ ಸಮೃದ್ಧ ಕರ್ನಾಟಕವನ್ನು ನಿರ್ಮಿಸುವ ಧ್ಯೇಯವನ್ನು ಈ ಕೈಗಾರಿಕಾ ನೀತಿಯು ಹೊಂದಿದೆ ಎಂದು ತಿಳಿಸಿದರು.
ಕೈಗಾರಿಕಾ ಬೆಳವಣಿಗೆಯ ದರವನ್ನು ವಾರ್ಷಿಕ ಶೇಕಡಾ 12 ರಷ್ಟು ಸಾಧಿಸುವುದು, ಈ ನೀತಿಯ ಅವಧಿಯ ಕೊನೆಯ ಹೊತ್ತಿಗೆ ರಾಜ್ಯದ ದೇಶೀಯ ಉತ್ಪನ್ನದಲ್ಲಿ ಉತ್ಪಾದನಾ ವಲಯದ ಕೊಡುಗೆಯನ್ನು ಶೇಕಡಾ 16.87 ರಿಂದ ಶೇಕಡಾ 20 ಕ್ಕೆ ಹೆಚ್ಚಳ ಮಾಡುವುದು, ಕೈಗಾರಿಕಾ ಬೆಳವಣಿಗೆಯನ್ನು ರಾಜ್ಯದ ಮೂಲೆ ಮೂಲೆಗೂ ಕೊಂಡೊಯ್ಯುವುದು ಮತ್ತು ಈ ನೀತಿಯ ಅವಧಿಯಲ್ಲಿ ಐದು ಲಕ್ಷ ಕೋಟಿ ರೂ. ಬಂಡವಾಳವನ್ನು ಆಕರ್ಷಿಸಿ, ಸುಮಾರು 15 ಲಕ್ಷ ಜನರಿಗೆ ಉದ್ಯೋಗವಾಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಈ ಹೊಸ ಕೈಗಾರಿಕಾ ನೀತಿಯು ಹೊಂದಿದೆ. ಕೈಗಾರಿಕೆಗಳ ಸ್ಥಾಪನೆಗಾಗಿ ಉತ್ತಮ ಮೂಲಭೂತ ಸೌಕರ್ಯ ಒದಗಿಸಲು ನೀತಿಯು ಒತ್ತು ನೀಡಿದೆ. ಈ ಸಂಬಂಧ ಪ್ರತಿ ವರ್ಷ 5000 ರಿಂದ 8000 ಎಕರೆಯಷ್ಟು ಜಮೀನನ್ನು ಸ್ವಾಧೀನಪಡಿಸಿಕೊಂಡು ಕನಿಷ್ಠ 5 ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಿದೆ. ಇಂಧನ ಮತ್ತು ಜಲ ಸಂಪನ್ಮೂಲ ಇಲಾಖೆಗಳು ಅಗತ್ಯ ವಿದ್ಯುತ್ ಮತ್ತು ನೀರನ್ನು ಸರ್ಕಾರದಿಂದ ಅಭಿವೃದ್ಧಿಪಡಿಸಲ್ಪಟ್ಟ ಕೈಗಾರಿಕಾ ಪ್ರದೇಶಗಳಿಗೆ ಒದಗಿಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ನಿರ್ದೇಶನ ನೀಡಲಾಗುವುದು. ಎಂದು ವಿವರಿಸಿದರು.