BW News Bureau : ಹೊಸ ಐಟಿ ಹಬ್ ಅನ್ನು 10,500 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ವೈಟ್ಫೀಲ್ಡ್ನಲ್ಲಿ ಕ್ಯಾಪ್ ಜಮಿನಿ ಕಂಪೆನಿ ನೂತನವಾಗಿ ನಿರ್ಮಿಸಿರುವ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಐಟಿ ಹಬ್ ನಿರ್ಮಾಣಕ್ಕೆ ಅಗತ್ಯವಿರುವ ಭೂಮಿಯನ್ನು ಮೊದಲ ಹಂತದ 2,023 ಎಕರೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಕೆಐಎಡಿಬಿಗೆ ಸೂಚಿಸಲಾಗಿದೆ. ಬೆಂಗಳೂರು ದೇಶದಲ್ಲೇ ಐಟಿ ಕ್ಷೇತ್ರದಲ್ಲಿ ಕ್ಷಿಪ್ರಗತಿಯ ಬೆಳವಣಿಗೆ ಸಾಧಿಸುತ್ತಿದ್ದು, ಇದನ್ನು ರಾಜ್ಯದ ಇತರೆ ನಗರಗಳಾದ ಮೈಸೂರು, ಬೆಳಗಾವಿ ಸೇರಿದಂತೆ ಇನ್ನಿತರೆಡೆ ವಿಸ್ತರಿಸಲು ಚಿಂತನೆ ನಡೆದಿದೆ. ಈ ದಿಸೆಯಲ್ಲಿ ಸಾಕಷ್ಟು ಬೆಳವಣಿಗೆ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಆಯ್ಕೆ ಕಂಪೆನಿ ಅಭಿವೃದ್ಧಿ ವಿಚಾರದಲ್ಲಿ ಸರ್ಕಾರದ ಸಹಾಯ ಸದಾ ಇರುತ್ತದೆ. ಅಲ್ಲದೆ, ಈಗಾಗಲೇ ಸರ್ಕಾರ ದೇಶದಲ್ಲೇ ನೂತನವಾದ ಐಟಿ ಹಾಗೂ ಕೈಗಾರಿಕಾ ನೀತಿ ಜಾರಿಗೆ ತಂದಿದೆ. ಇದರಿಂದ ಹೆಚ್ಚು ಮಂದಿಗೆ ಉದ್ಯೋಗ ದೊರೆಯಲು ಅನುವಾಗಿದೆ ಎಂದರು.
ಸಚಿವ ಎಸ್.ಆರ್.ಪಾಟೀಲ್ ಮಾತನಾಡಿ, ಪ್ರಸ್ತುತ ಐಟಿ ಕ್ಷೇತ್ರದಲ್ಲಿ 40 ಲಕ್ಷ ಉದ್ಯೋಗಿಗಳಿದ್ದಾರೆ. 2020ರ ವೇಳೆಗೆ ಇದು 80 ಲಕ್ಷ ಮುಟ್ಟುವ ಸಾಧ್ಯತೆಯಿದೆ ಎಂದು ತಿಳಿಸಿದರು. ಬೆಂಗಳೂರಿನ ವಿವಿಧೆಡೆ ಈಗಾಗಲೇ ಉಚಿತ ವೈ-ಫೈ ಸೌಲಭ್ಯವಿದೆ. ಇಂತಹ ವಿಶಿಷ್ಟ ಅತ್ಯುಪಯುಕ್ತ ಸೌಲಭ್ಯಗಳನ್ನು ನೀಡಲು ಸಾಧ್ಯವಾಗಿದೆ ಎಂದರು.
ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಬೇರೆ ದೇಶಗಳನ್ನು ಅವಲಂಬಿಸದೆ ಸ್ವಾವಲಂಬಿಯಾಗಲು ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆ ಅಗತ್ಯ ಎಂದ ಅವರು, ವಿವಿಧ ಕಂಪೆನಿಗಳು ಬೇರೆ ರಾಜ್ಯಗಳತ್ತ ತೆರಳುತ್ತಿವೆ ಎಂಬ ಆರೋಪ ಮಾಡಲಾಗುತ್ತಿದೆ. ಆದರೆ, ಕ್ಯಾಬ್ ಜಮಿನಿ ತನ್ನ ಕಾರ್ಯವನ್ನು ರಾಜ್ಯದಲ್ಲಿ ವಿಸ್ತರಿಸುವ ಮೂಲಕ ಇಂತಹ ಆರೋಪಗಳಿಗೆ ಉತ್ತರ ನೀಡಿದೆ ಎಂದು ಹೇಳಿದರು.