ಬೆಂಗಳೂರು : ಚರ್ಚ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಸ್ಟಿಸ್ ಸೋಮಶೇಖರ್ ಆಯೋಗದ ವರದಿ ತಿರಸ್ಕರಿಸಲು ರಾಜ್ಯ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ..
2008-09ರಲ್ಲಿ ರಾಜ್ಯದಲ್ಲಿ ನದೆದ ಚರ್ಚ್ ಗಳ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜ.ಸೋಮಶೇಖರ್ ಆಯೋಗದ ವರದಿಯನ್ನು ತಿರಸ್ಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಸಮ್ಮತಿ ನೀಡಲಾಗಿದೆ.
ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಈ ಬಗ್ಗೆ ಸ್ಪಷ್ಟಪಡಿಸಿದ್ದು, ಪ್ರಕರಣವನ್ನು ಗೃಹ ಇಲಾಖೆಗೆ ವರ್ಗಾಯಿಸಿ, ಹೊಸದಾಗಿ ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಯಾರ ಒತ್ತಡಕ್ಕೂ ಮಣಿದು ಈ ನಿರ್ಧಾರ ಕೈಗೊಂಡಿಲ್ಲ, ಇದರಲ್ಲಿ ಗೃಹ ಸಚಿವರ ಕೈವಾಡವೂ ಇಲ್ಲ, ವರದಿಯಲ್ಲಿ ವ್ಯತ್ಯಾಸವಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
2008-09ರಲ್ಲಿ ಬೆಂಗಳೂರು, ದಾವಣಗೆರೆ, ಉಡುಪಿ ಸೇರಿದಂತೆ ರಾಜ್ಯದ ವಿವಿಧೆಡೆಗಳಲ್ಲಿ ಚರ್ಚ್ ಗಳ ಮೇಲೆ ಸರಣಿ ದಾಳಿ ನಡೆದಿದ್ದು, ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜ.ಸೋಮಶೇಖರ್ ನೇತೃತ್ವದಲ್ಲಿ ಆಯೋಗ ರಚಿಸಿ ವರದಿ ನೀಡುವಂತೆ ಸೂಚಿಸಿದ್ದರು.
2010ರಲ್ಲಿ ಜ.ಸೋಮಶೇಖರ್ ಆಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಮಧ್ಯಂತರ ವರದಿಯನ್ನು ನೀಡಿತ್ತು. ವರದಿಯಲ್ಲಿ ಚರ್ಚ್ ಮೇಲಿನ ದಾಳಿಯ ಹಿಂದೆ ಸಂಘಪರಿವಾರದ ಕೈವಾಡವಿದೆ ಎಂದು ಹೇಳಲಾಗಿತ್ತು. ಆದರೆ 2011, ಫೆ.18ರಂದು ಅದೇ ಆಯೋಗ ನೀಡಿದ ಸಂಪೂರ್ಣ ವರದಿಯಲ್ಲಿ ಪ್ರಕರಣದ ಹಿಂದೆ ಸಂಘಪರಿವಾರವಾಗಲೀ ಅಥವಾ ಯಾವುದೇ ಹಿಂದೂ ಪರ ಸಂಘಟನೆಗಳ ಕೈವಾಡವಿಲ್ಲ. ಕೆಲ ಚರ್ಚ್ ಗಳು ಮತಾಂತರಕ್ಕೆ ಯತ್ನ ನಡೆಸಿದ ಹಿನ್ನಲೆಯಲ್ಲಿ ಈ ದಾಳಿ ನಡೆದಿರಬಹುದು ಎಂದು ತಿಳಿಸಿತ್ತು. ಬಳಿಕ ಬಿಜೆಪಿ ಸರ್ಕಾರದ ಅವಧಿಯಲ್ಲಿ ವರದಿ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಂಡಿರಲಿಲ್ಲ.
ಈಗ ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ವರದಿ ಹಾಗೂ ಸಂಪೂರ್ಣ ವರದಿಗಳಲ್ಲಿ ವ್ಯತ್ಯಾಸವಿರುವುದರಿಂದ ಸೋಮಶೇಖರ್ ಆಯೋಗದ ವರದಿ ತಿರಸ್ಕರಿಸಬೇಕು ಹಾಗೂ ಹೊಸದಾಗಿ ತನಿಖೆ ನಡೆಸಲು ತೀರ್ಮಾನಿಸಿದೆ.
ರಾಜ್ಯ ಚುನಾವಣಾ ಆಯುಕ್ತರನ್ನಾಗಿ ಶ್ರೀನಿವಾಸ್ ಆಚಾರ್ಯ ನೇಮಕ, ರೈತರ ಮೇಲಿನ ಮೊಖದ್ದಮೆ ವಾಪಸ್ ಪಡೆಯುವುದು, ಕಡತ ವಿಲೇವಾರಿ ಸಪ್ತಾಹ ನಡೆಸಲು ಮೊದಲಾದ ಮಹತ್ವದ ನಿರ್ಧಾರಗಳನ್ನು ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ.