ಬೆಂಗಳೂರು : 'ದೀಪಾವಳಿ' ಹಬ್ಬದ ಆಚರಣೆಗೆ ಕೆಲವೇ ದಿನಗಳು ಬಾಕಿ ಉಳಿದಿದೆ. ರಾಜ್ಯಾದ್ಯಂತ ದೀಪಾವಳಿಗೆ ತಯಾರಿ ನಡೆಯುತ್ತಿದ್ದು ಖಾಸಗಿ ಬಸ್ ಗಳಲ್ಲಿ ಪಟಾಕಿ ಸಾಗಣೆ ಭರದಿಂದ ಸಾಗಿದೆ.
ಇತ್ತೀಚಿನ ದಿನಗಳಲ್ಲಿ ಖಾಸಗಿ ಬಸ್ ಗಳು ಬೆಂಕಿ ಅವಘಡಕ್ಕೆ ತುತ್ತಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ವೋಲ್ವೊ ಬಸ್ ಗಳಲ್ಲಿ ಪಟಾಕಿ ಸಾಗಣೆ ಮಾಡದಂತೆ ಆರ್.ಟಿ.ಒ ಅಧಿಕಾರಿಗಳು ಎಚ್ಚರ ವಹಿಸಿದ್ದಾರೆ. ಬೆಂಗಳೂರಿನಿಂದ ಹೊರಭಾಗಗಳಿಗೆ ತೆರಳುವ ಬಸ್ ಗಳನ್ನು ಆರ್.ಟಿ.ಒ ಅಧಿಕಾರಿಗಳು ಗೊರಗುಂಟೆ ಪಾಳ್ಯದ ಬಳಿ ತಡೆದು ತಪಾಸಣೆ ನಡೆಸುತ್ತಿದ್ದಾರೆ.
ಈ ವರೆಗೂ ನಡೆಸಿರುವ ತಪಾಸಣೆಯಲ್ಲಿ ಪಟಾಕಿ,ಕೆಮಿಕಲ್ ವಸ್ತುಗಳನ್ನು ಸಾಗಿಸಲಾಗುತ್ತಿದ್ದ 27 ಖಾಸಗಿ ವೋಲ್ವೊ ಬಸ್ ಗಳನ್ನು ಜಪ್ತಿ ಮಾಡಲಾಗಿದೆ.
ಕಳೆದ ವರ್ಷ ಆಂಧ್ರಪ್ರದೇಶದ ಮೆಹಬೂಬ್ ನಗರದಲ್ಲಿ ವೋಲ್ವೋ ಬಸ್ ದುರಂತಕ್ಕೆ ಬಸ್ಸಿನಲ್ಲಿದ್ದ ಪಟಾಕಿಗಳೇ ಕಾರಣ ಎಂದು ತನಿಖೆಯಿಂದ ಸ್ಟಷ್ಟವಾಗಿತ್ತು. ಈ ದುರಂತದಲ್ಲಿ 45 ಮಂದಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.