ನವದೆಹಲಿ : ಸಂಸದ ಆದರ್ಶ ಗ್ರಾಮ ಯೋಜನೆ ದೇಶದ ಬಡವರು, ರೈತರಿಗಾಗಿ ಜಾರಿಗೊಳಿಸಲಾಗಿದೆ. ಎಲ್ಲಾ ರಾಜ್ಯಗಳೂ ಈ ಯೋಜನೆಯನ್ನು ಜಾರಿಗೆ ತರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ನವದೆಹಲಿಯ ವಿಜ್ನಾನ ಭವನದಲ್ಲಿ ಸಂಸದ ಆದರ್ಶ ಗ್ರಾಮ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾತಂತ್ರ್ಯಾ ನಂತರ ಪ್ರತಿ ಸರ್ಕಾರದಿಂದಲೂ ಗ್ರಾಮಗಳ ಅಭಿವೃದ್ಧಿ ನಡೆಯುತ್ತಿದೆ. ದೇಶದ ಬದಲಾವಣೆಗಾಗಿ ಯೋಜನೆಗಳನ್ನು ರೂಪಿಸಬೇಕು. ಅಭಿವೃದ್ಧಿ ರಾಷ್ಟ್ರಗಳ ಜತೆ ಪೈಪೋಟಿ ನಡೆಸಲು ಯೋಜನೆಗಳು ಅಗತ್ಯ. ಹಳ್ಳಿಗಳ ಸಮಗ್ರ ಅಭಿವೃದ್ಧಿಯೇ ಆದರ್ಶ ಗ್ರಾಮ ಯೋಜನೆಯ ಉದ್ದೇಶ ಎಂದರು.
ಎಲ್ಲಾ ರಾಜ್ಯಗಳಲ್ಲೂ 5-10 ಆದರ್ಶ ಗ್ರಾಮಗಳಿಗೆ. ಅಭಿವೃದ್ಧಿಗೆ ಜನರ ಭಾಗವಹಿಸುವಿಕೆಯೂ ಮುಖ್ಯ. ದೇಶದಲ್ಲಿ ಕೆಲವೇ ಗ್ರಾಮಗಳಲ್ಲಿ ಮಾತ್ರ ಅಭಿವೃದ್ಧಿಯಾಗಿವೆ.ಯಾಕೆಂದರೆ ಆ ಗ್ರಾಮದ ಜನತೆ ಬದಲಾವಣೆ ಬಯಸಿದ್ದರು. ಅಭಿವೃದ್ಧಿಹೊಂದಿದ ರಾಷ್ಟ್ರಗಳ ಜತೆ ಪೈಪೋಟಿ ನಡೆಸಲು ಬದಲಾವಣೆ ಅಗತ್ಯ. ಅಭಿವೃದ್ಧಿ ಎಂಬುದು ಒಂದು ನಿಲ್ಲದ ಪ್ರಕ್ರಿಯೆ. ಪ್ರತಿ ಗ್ರಾಮವೂ ಸಮಾಜದಂತೆ ಬದಲಾಗಬೇಕು ಎಂದು ತಿಳಿಸಿದರು.
ಜಯಪ್ರಕಾಶ್ ನಾರಾಯಣ ಅವರ ಜೀನವ ನಮಗೆ ಪ್ರೇರಣೆಯಾಗಬೇಕು. ಮಹಾತ್ಮಾ ಗಾಂಧೀಜಿ ಗ್ರಾಮೀಣ ಜನರ ಹಕ್ಕಿಗಾಗಿ ಹೋರಾಟ ಮಾಡಿದರು ಎಂದ ಮೋದಿ, ಸಂಸದರ ನೇತೃತ್ವದಲ್ಲಿ ಆದರ್ಶ ಗ್ರಾಮ ಯೋಜನೆ ನಡೆಯಲಿದೆ. ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ಸಂಸದರು ಗಮನಹರಿಸಬೇಕು. ದೇಶದ ಬಡವರ ಅಭಿವೃದ್ಧಿಯೇ ನಮ್ಮ ಕನಸು ಎಂದರು.
ಒಂದು ಗ್ರಾಮ ಅಭಿವೃದ್ಧಿಯಾದರೆ ಮತ್ತೊಂದು ಗ್ರಾಮದಲ್ಲಿ ಆ ಬಗ್ಗೆ ಚರ್ಚೆಯಾಗುತ್ತದೆ. ಆಗ ಆ ಗ್ರಾಮದಲ್ಲಿ ಬದಲಾವಣೆಯ ಗಾಳಿ ಬೀಸುತ್ತದೆ. ಪ್ರತಿ ಹಳ್ಳಿಯನ್ನು ಅಭಿವೃದ್ಧಿ ಮಾಡುವುದೇ ಯೋಜನೆಯ ಉದ್ದೇಶ. ಶೇ.100ರಷ್ಟು ಶಿಕ್ಷಣ ನೀಡುವುದೇ ನಮ್ಮ ಗುರಿಯಾಗಿದ್ದು, ಎಲ್ಲಾ ರಾಜ್ಯಗಳೂ ಈ ಯೋಜನೆಯನ್ನು ಜಾರಿಗೆ ತರಬೇಕು ಎಂದು ಮೋದಿ ಕರೆ ನೀಡಿದರು.
ನಮ್ಮ ದೇಶದಲ್ಲಿ 800 ಜನ ಸಂಸದರಿದ್ದಾರೆ. ಪ್ರತಿಯೊಬ್ಬ ಸಂಸದರೂ 3 ಗ್ರಾಮಗಳನ್ನು ಅಭಿವೃದ್ಧಿಮಾಡಿದರೆ 5 ವರ್ಷಗಳಲ್ಲಿ 2,500 ಗ್ರಾಮಗಳು ಅಭಿವೃದ್ಧಿಯಾಗಲಿವೆ. ರಾಜ್ಯದಲ್ಲಿ ಶಾಸಕರಿಗಾಗಿಯೂ ಯೋಜನೆಯನ್ನುಆರಂಭಿಸಬೇಕಿದೆ. ಈ ಯೋಜನೆ ಶಾಸಕರ ನೇತೃತ್ವದಲ್ಲಿ ನಡೆಯಲಿ, ಶಾಸಕರೂ ಒಂದು ಆದರ್ಶ ಗ್ರಾಮ ನಿರ್ಮಿಸಲಿ. ಈ ಯೋಜನೆಯಲ್ಲಿ ಒಂದು ಷರತ್ತು ಇದೆ. ಸಂಸದರು ತಮ್ಮ ಸ್ವಂತ ಗ್ರಾಮವನ್ನು ದತ್ತುಪಡೆದುಕೊಳ್ಳಬಾರದು ಎಂದರು. ನಾನೂ ಕೂಡ ವಾರಾಣಸಿಯಲ್ಲಿ ಒಂದು ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಆ ಗ್ರಾಮದ ಅಭಿವೃದ್ಧಿಗಾಗಿ ಗಡುವನ್ನೂ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.
ದೇಶದ ಗ್ರಾಮಗಳ ನೈಜ ಸ್ಥಿತಿಯ ಬಗ್ಗೆ ನನಗೆ ಗೊತ್ತಿದೆ. ದೇಶದ 400 ಗ್ರಾಮಗಳಲ್ಲಿ ನಾನು ಪ್ರವಾಸ ಮಾಡಿದ್ದೇನೆ ಎಂದ ಪ್ರಧಾನಿ ಮೋದಿ, ಸಾಮಾಜಿಕ ಸಾಮರಸ್ಯಕ್ಕೆ ನಮಗಿದು ಒಂದು ಅವಕಾಶ, ಸಂಸದರು ಆಯ್ಕೆ ಮಾಡಿಕೊಂಡ ಗ್ರಾಮಕ್ಕೆ ತಮ್ಮ ಪರಿವಾರ ಸಮೇತ ತೆರಳಲಿ. ಜನರು ತಮ್ಮ ಗ್ರಾಮಗಳ ಬಗ್ಗೆ ಹೆಮ್ಮೆ ಪಡುವಂತಹ ವಾತಾವರಣ ನಿರ್ಮಾಣವಾಗಬೇಕು. ದೇಶದ ಗ್ರಾಮಗಳು ತೀರ್ಥಕ್ಷೇತ್ರಗಳಾಗಬೇಕು ಎಂದರು.
ಈ ಹಿಂದೆಯೂ ಇಂತಹ ಯೋಜನೆಗಳು ಇದ್ದವು. ಆದರೆ ಪರಿವರ್ತನೆ ಸಾಧ್ಯವಾಗಿರಲಿಲ್ಲ, ಯೋಜನೆಗಳಿಗೆ ಹೊಸ ರೂಪು-ರೇಷೆ ನೀಡುವ ಅಗತ್ಯವಿದೆ. ಈ ಯೋಜನೆ ರಚನಾತ್ಮಕ ರಾಜನೀತಿಯ ಉದ್ದೇಶವಾಗಿದೆ ಎಂದು ಮೋದಿ ತಿಳಿಸಿದ್ದಾರೆ.