ಇಸ್ಲಾಮಾಬಾದ್ : ಗುಜರಾತ್ ಸಂತ್ರಸ್ತರಂತೆ ಪಾಕಿಸ್ತಾನ ಸುಮ್ಮನೆ ಕೂರುವುದಿಲ್ಲ, ಪ್ರತಿಕಾರ ತೀರಿಸಿಕೊಳ್ಳಬಲ್ಲದು ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲು ಹಾಕಿದ್ದಾರೆ.
ಕೆಲದಿನಗಳ ಹಿಂದಷ್ಟೇ, ಪಾಕಿಸ್ತಾನದ ಇತರ ಪ್ರಾಂತ್ಯಗಳಂತೆಯೇ ಕಾಶ್ಮೀರ ಕೂಡ ಪಾಕಿಸ್ತಾನದ್ದೇ ಆಗಿದೆ. ನಾನು ಭಾರತದ ವಶದಲ್ಲಿರುವ ಕಾಶ್ಮೀರವನ್ನು ಸಂಪೂರ್ಣವಾಗಿ ವಾಪಸ್ ಪಡೆಯುತ್ತೇನೆ ಎಂದು ಅಬ್ಬರಿಸಿದ್ದ ಬಿಲಾವಲ್ ಭುಟ್ಟೋ ಈಗ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗುಜರಾತ್ ಸಂತ್ರಸ್ತರಂತೆ ನಾವು ಸುಮ್ಮನೆ ಕೂರುವುದಿಲ್ಲ, ಪಾಕಿಸ್ತಾನ ಭಾರತದ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಬಲ್ಲದು ಎಂದು ಕಿಡಿಕಾರಿದ್ದಾರೆ.
ಈ ಮಧ್ಯೆ ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕ್ ಸೇನೆ ನಿರಂತರವಾಗಿ ಕದನ ವಿರಾಮ ಉಲ್ಲಂಘನೆ ಮಾಡುವ ಮೂಲಕ ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದರೂ ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳಲು ಭಾರತವೇ ಕ್ಯಾತೆತೆಗೆಯುತ್ತಿದೆ ಎಂದು ಪಾಕ್ ಮಾಧ್ಯಮಗಳು ಹಾಗೂ ಜನಪ್ರತಿನಿಧಿಗಳು ಗೂಬೆಕೂರಿಸುವೆ.
ಈ ನಿಟ್ಟಿನಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್, ರಾಷ್ಟ್ರೀಯ ಭದ್ರತಾ ಸಮಿತಿ ಸಭೆ ಕರೆದಿದ್ದಾರೆ. ಅ.10ರಂದು ಈ ಸಭೆ ನಡೆಯಲಿದ್ದು, ಭಾರತಕ್ಕೆ ಕಠಿಣ ಸಂದೇಶ ರವಾನಿಸಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.