ಬೆಂಗಳೂರು : ವಿಧಾನಸೌಧ ಹಾಗೂ ವಿಕಾಸಸೌಧದ ನಡುವೆ ಗಾಂಧಿ ಪುತ್ಥಳಿ ಉದ್ಘಾಟನಾ ಸಮಾರಂಭಕ್ಕೆ ಚಕ್ರವರ್ತಿ ಸೂಲಿಬೆಲೆ ಅವರನ್ನು ಆಹ್ವಾನಿಸಿದ್ದಕ್ಕೆ ಸೂಕ್ತ ಕಾರಣ ಕೇಳಿ ಕಾಂಗ್ರೆಸ್ ಕಾರ್ಯಕರ್ತರು ವಿಧಾನಪರಿಷತ್ ಸಭಾಧ್ಯಕ್ಷ ಡಿ.ಹೆಚ್ ಶಂಕರ ಮೂರ್ತಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಅ.8ರಂದು ಡಿ.ಹೆಚ್ ಶಂಕರ ಮೂರ್ತಿ ಅವರ ನಿವಾಸಕ್ಕೆ ತೆರಳಿದ ಕಾಂಗ್ರೆಸ್ ಕಾರ್ಯಕರ್ತರು, ಗಾಂಧಿ ಜಯಂತಿ ದಿನ ವಿಧಾನಸೌಧ ಹಾಗೂ ವಿಕಾಸಸೌಧದ ನಡುವೆ ಗಾಂಧಿ ಪುತ್ಥಳಿ ಉದ್ಘಾಟನಾ ಸಮಾರಂಭಕ್ಕೆ ಚಕ್ರವರ್ತಿ ಸೂಲಿಬೆಲೆ ಅವರನ್ನು ಆಹ್ವಾನಿಸಿದ್ದಕ್ಕೆ ಸೂಕ್ತ ಕಾರಣ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತರ ವರ್ತನೆಗೆ ಬೇಸರ ವ್ಯಕ್ತಪಡಿಸಿರುವ ವಿಧಾನ ಪರಿಷತ್ ಸಭಾಧ್ಯಕ್ಷ ಡಿ.ಹೆಚ್ ಶಂಕರ ಮೂರ್ತಿ, ಸಮಾರಂಭಕ್ಕೆ ಚಕ್ರವರ್ತಿ ಸೂಲಿಬೆಲೆ ಅವರನ್ನು ಆಹ್ವಾನಿಸಿದ್ದನ್ನು ಸಮರ್ಥಿಸಿಕೊಂಡಿದ್ದಾರೆ. ಸಮಾರಂಭ ಚೆನ್ನಾಗಿ ನಡೆಯುವುದು ಮುಖ್ಯ, ಗಾಂಧಿ ಪುತ್ಥಳಿ ಉದ್ಘಾಟನಾ ಸಮಾರಂಭ ಚೆನ್ನಾಗಿಯೇ ನಡೆದಿದೆ. ಚಕ್ರವರ್ತಿ ಸೂಲಿಬೆಲೆ ಅವರನ್ನು ಆಹ್ವಾನಿಸಿದ್ದಕ್ಕೆ ಆಕ್ಷೇಪ ಕೇಳಿಬರುತ್ತಿರುವುದಕ್ಕೆ ಕಾರಣ ತಿಳಿದಿಲ್ಲ ಎಂದಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿರುವ ಶಂಕರ ಮೂರ್ತಿ, ಆರ್.ಎಸ್.ಎಸ್ ಹಿನ್ನೆಲೆಯಿಂದ ಬಂದಿರುವುದರ ಬಗ್ಗೆ ನನಗೂ ಹೆಮ್ಮೆಯಿದೆ, ಹಾಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಕರ್ನಾಟಕದ 3 ಮುಖ್ಯಮಂತ್ರಿಗಳು ಆರ್.ಎಸ್.ಎಸ್ ಹಿನ್ನೆಲೆಯುಳ್ಳವರು, ಆರ್.ಎಸ್.ಎಸ್ ಬಗ್ಗೆ ಅರಿವು ಬೇಕಿದ್ದರೆ, ಸಂಘದ ನಾಯಕರನ್ನೇ ಸಂಪರ್ಕ ಮಾಡುವುದರ ಮೂಲಕ ತಿಳಿದುಕೊಳ್ಳಲಿ ಎಂದು ಶಂಕರ ಮೂರ್ತಿ ಹೇಳಿದ್ದಾರೆ.