BW News Bureau : ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಗರಂ ಆಗಿರುವ ಮೇಯರ್ ಶಾಂತಕುಮಾರಿ, ಕಚಡಾ ಅಧಿಕಾರಿಗಳನ್ನು ಮನೆಗೆ ಕಳುಹಿಸುವುದಾಗಿ ಗುಡುಗಿದ್ದಾರೆ.
ಭನ್ನೇರುಘಟ್ಟ ರಸ್ತೆಯಲ್ಲಿನ ರಾಜಕಾಲುವೆಗೆ ಗೀತಾಲಕ್ಷ್ಮಿ ಎಂಬ ಬಾಲಕಿ ಬಿದ್ದು ಎರಡು ದಿನಗಳಾದರೂ ಬಾಲಕಿ ಈ ವರೆಗೂ ಪತ್ತೆಯಾಗಿಲ್ಲ. ಪತ್ತೆಗಾಗಿ ನಡೆಸುತ್ತಿರುವ ಶೋಧಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ.
ಅ.7ರಂದು ಸಂಜೆ ನಗರದಲ್ಲಿ ಭಾರೀ ಮಳೆ ಸುರಿಯುತ್ತಿದ್ದ ವೇಳೆ ಬಾಲಕಿ ಗೀತಾಲಕ್ಷ್ಮೀ ತನ್ನ ಅತ್ತೆಮನೆಗೆ ಬರುತ್ತಿದ್ದಾಗ ಭನ್ನೇರುಘಟ್ಟ ರಸ್ತೆಯಲ್ಲಿನ ರಾಜಕಾಲುವೆಗೆ ಜಾರಿ ಬಿದ್ದಿದ್ದಾಳೆ.
ಈ ನಡುವೆ ಘಟನಾಸ್ಥಳಕ್ಕೆ ಭೇಟಿ ನೀಡಿದ ಮೇಯರ್ ಶಾಂತಕುಮಾರಿ, ಎರಡು ದಿನಗಳಿಂದ ಬಿಬಿಎಂಪಿ ಅಧಿಕಾರಿಗಳು ಶೋಧಕಾರ್ಯ ನಡೆಸುತ್ತಿದ್ದಾರೆ. ಬಿಬಿಎಂಪಿಯಲ್ಲಿ ಕೆಲವರು ಸಮರ್ಥ ಅಧಿಕಾರಿಗಳಿದ್ದಾರೆ. ಇನ್ನು ಕೆಲವರು ಸೋಮಾರಿಗಳಿದ್ದಾರೆ. ಮೊದಲು ಬಾಲಕಿ ಪತ್ತೆಯಾಗಬೇಕು. ಬಳಿಕ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದರು.
ಈ ಅಧಿಕಾರಿಗಳಿಂದ ನಮಗೇನೂ ಆಗಬೇಕಾಗಿಲ್ಲ, ಜನತೆಯ ಹಿತ ಮುಖ್ಯವಷ್ಟೇ. ಬಿಬಿಎಂಪಿಯಲ್ಲಿರುವ ಶೇ.10ರಷ್ಟು ಕಚಡಾ ಅಧಿಕಾರಿಗಳನ್ನು ಮನೆಗೆ ಕಳುಹಿಸಲಾಗುವುದು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆಯೂ ಮಾತನಾಡುತ್ತೇನೆ. ಬಿಬಿಎಂಪಿ ಆಯುಕ್ತರಿಗೂ ಆದೇಶ ನೀಡುತ್ತೇನೆ ಎಂದು ತರಾಟೆಗೆ ತೆಗೆದುಕೊಂಡರು.