ಮುಂಬೈ : ಬಾಳ ಠಾಕ್ರೆ ಬಗ್ಗೆ ನನಗೆ ಅಪಾರ ಗೌರವವಿದೆ ಹೀಗಾಗಿ ಶಿವಸೇನೆ ವಿರುದ್ಧ ಮಾತನಾಡುವುದಿಲ್ಲ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ತಿರುಗೇಟು ನೀಡಿದ್ದಾರೆ.
ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಬಾಳ ಠಾಕ್ರೆ ಮೇಲಿನ ವೈಯಕ್ತಿಕ ಗೌರವಕ್ಕೆ ಸ್ವಾಗತ. ಆದರೆ ಶಿವಸೇನೆಯೊಂದಿಗಿನ 25 ವರ್ಷಗಳ ಸುದೀರ್ಘ ಮೈತ್ರಿ ಮುರಿಯುವಾಗ ಬಾಳ ಠಾಕ್ರೆ ಯಾಕೆ ನೆನಪಾಗಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ-ಶಿವಸೇನೆ ನಡುವಿನ ಮೈತ್ರಿ ಮುರಿದು ಬಿದ್ದಾಗ ಪ್ರಧಾನಿ ಮೋದಿಯವರು ಯಾಕೆ ಮೌನ ವಹಿಸಿದ್ದರು, ಕೇವಲ ಸೀಟು ಹೊಂದಾಣಿಕೆಗಾಗಿಯೇ ಮೈತ್ರಿ ಮುರಿದು ಬಿದ್ದಾಗ ಮೋದಿ ಯಾಕೆ ಸರಿಪಡಿಸಲಿಲ್ಲ, ಅಂದು ಮೌನ ವಹಿಸಿದ ಇವರು ಇಂದು ಬಾಳ ಠಾಕ್ರೆ ಬಗ್ಗೆ ಅಪಾರ ಗೌರವವಿದೆ ಎಂದು ಹೇಳಿದರೆ ನಂಬಬಹುದೆ ಎಂದು ಕಿಡಿಕಾರಿದ್ದಾರೆ.
ಗೋದ್ರಾ ಗಲಭೆ ವೇಳೆ ಇಡೀ ಬಿಜೆಪಿ ಮೋದಿ ವಿರುದ್ಧ ತಿರುಗಿ ಬಿದ್ದಾಗ ಮೋದಿ ಬೆಂಬಲಕ್ಕೆ ನಿಂತ ಏಕೈಕ ನಾಯಕನೆಂದರೆ ಠಾಕ್ರೆಯವರು. ಅದನ್ನು ಪ್ರಧಾನಿ ಮೋದಿ ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿರುವ ಉದ್ಧವ್ ಠಾಕ್ರೆ, ಕೇವಲ ತೋರಿಕೆಗಾಗಿ ಬಾಳ ಠಾಕ್ರೆ ಮೇಲೆ ಗೌರವವಿದೆ ಎನ್ನುತ್ತಾ ಶಿವಾಜಿ ಹೆಸರಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಅಸಲಿ ದರೋಡೆಕೋರರು ಯಾರೆಂದು ಜನತೆಗೆ ಗೊತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.