ಸಾಂಗ್ಲಿ : ಶಿವಸೇನೆ ಸಂಸ್ಥಾಪಕ ಬಾಳ ಠಾಕ್ರೆ ಮೇಲಿನ ಗೌರವದಿಂದಾಗಿ ಶಿವಸೇನೆ ವಿರುದ್ಧ ಮಾತನಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಸಾಂಗ್ಲಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಿದ ಪ್ರಧಾನಿ ಮೋದಿ, ಶಿವಸೇನೆ ವಿರುದ್ಧ ಯಾಕೆ ಮಾತನಾಡುವುದಿಲ್ಲ ಎಂದು ಹಲವರು ಕೇಳುತ್ತಾರೆ. ಆದರೆ ಬಿಜೆಪಿ ಜತೆ ಅವರು ಎರಡುವರೆ ದಶಕಗಳ ಕಾಲ ಮೈತ್ರಿ ಹೊಂದಿದ್ದರು. ಅನಿವಾರ್ಯ ಕಾರಣಗಳಿಂದ ದೂರವಾಗಿದ್ದಾರೆ. ಬಾಳ ಠಾಕ್ರೆ ಅವರಿಗೆ ಕೃತಜ್ನತೆ ಸಲ್ಲಿಸುವ ಕಾರಣಕ್ಕಾಗಿ ನಾನು ಶಿವಸೇನೆ ವಿರುದ್ಧ ಮಾತನಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಾಂಗ್ಲಿಗೂ ನನಗೂ ವಿಶೇಷವಾದ ಬಾಂಧ್ಯವ್ಯವಿದೆ ಎಂದ ಮೋದಿ, ಲೋಕಸಭಾ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆಗೆ ಇಲ್ಲಿ ಬಂದಿದ್ದೆ. ನಾನು ಕೇಳಿದ್ದಕ್ಕಿಂತಲೂ ಹೆಚ್ಚಿನದನ್ನೇ ನೀವು ನನಗೆ ನೀಡಿದ್ದೀರಾ. ಸ್ವಾತಂತ್ರ್ಯಾ ನಂತರ ಸಾಂಗ್ಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿರಲಿಲ್ಲ, ಆದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇದು ಬಿಜೆಪಿ ಮೇಲೆ ನಿಮಗಿರುವ ಒಲವನ್ನು ತೋರುತ್ತದೆ ಎಂದರು.
ಗುಜರಾತ್ ಮೊದಲು ಮಹಾರಾಷ್ಟ್ರಕ್ಕೆ ಸೇರಿದ ಭಾಗವಾಗಿತ್ತು. ಈಗಲೂ ಗುಜರಾತ್ ಮಹರಾಷ್ಟ್ರದ ತಮ್ಮನಿದ್ದಂತೆ ಮಹಾರಾಷ್ಟ್ರ ಗುಜರಾತ್ ನ ಹಿರಿಯ ಸಹೋದರನಿದ್ದಂತೆ ನಾನು ನಿಮ್ಮ ಸೇವೆ ಮಾಡಲು ಬಂದಿರುವ ಕೆಲಸಗಾರ, ಜನರಿಗಾಗಿ ಕೆಲಸ ಮಾಡುವಂತವರು ನನ್ನೊಂದಿಗಿದ್ದಾರೆ ಎಂದರು.
ಎನ್ ಸಿಪಿ ಮುಖಂಡ ಶರದ್ ಪವಾರ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ನೀವು ಹಲವು ವರ್ಷ ಮಹಾರಾಷ್ಟ್ರದ ಸಿಎಂ ಆಗಿದ್ದವರು, ಕೇಂದ್ರದಲ್ಲಿ ಕೃಷಿ ಸಚಿವರಾಗಿದ್ದವರು, ಆದರೆ ಮಹಾರಾಷ್ಟ್ರಕ್ಕಾಗಿ ನೀವು ಏನು ಮಾಡಿದ್ದೀರಾ ಎಂದು ಪ್ರಶ್ನಿಸಿದರು.
ಛತ್ರಪತಿ ಶಿವಾಜಿ ನಾಡಲ್ಲಿ ಹುಟ್ಟಿದ್ದು ನೀವು, ಮಹಾರಾಷ್ಟ್ರದ ನಿರ್ಮಾತೃ ಶಿವಾಜಿ ಹೆಸರು ಬಳಸಿಕೊಂಡೇ ರಾಜಕಾರಣ ಮಾಡಿದ್ದು ಶರದ್ ಪವಾರ್ ಸಾಧನೆ. ಒಂದು ಬಾರಿಯೂ ರೈತರು, ಬಡವರು, ದೀನದಲಿತರ ಬಗ್ಗೆ ಚಕಾರವೆತ್ತದ ಇವರು ನಿಮ್ಮಕಷ್ಟಕ್ಕೆ ಎಂದಾದರೂ ಸಹಾಯ ಮಾಡಿದ್ದಾರಾ? ಸ್ಥಿರ ಮತ್ತು ಸುಭದ್ರ ಸರ್ಕಾರಕ್ಕಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.
ಅದರ್ಶ ಸೊಸೈಟಿ ಹಗರಣ, ನರ್ಮದಾ ನದಿ ಯೋಜನೆಗಳಲ್ಲಿ ಕಾಂಗ್ರೆಸ್ ಹಾಗೂ ಎನ್ ಸಿಪಿ ನಾಯಕರು ಭಾಗಿಯಾಗಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡರೂ ಕೇಂದ್ರದಲ್ಲಿ ಕೃಷಿ ಸಚಿವರಾಗಿದ್ದ ಶರದ್ ಪವಾರ್ ಈ ಭಾಗದ ಜನತೆಗೆ ಯಾವ ಕೊಡುಗೆಯನ್ನೂ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದರು.