ಪಾಟ್ನಾ : 'ದಸರಾ' ಆಚರಣೆ ಅಂಗವಾಗಿ ಪಾಟ್ನಾದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾಲ್ತುಳಿತ ಉಂಟಾಗಿ ಮೂವತ್ತೆರಡು ಜನ ಸಾವನ್ನಪ್ಪಿದ್ದಾರೆ. ಕಾಲ್ತುಳಿತದಲ್ಲಿ ಹಲವು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರಲ್ಲಿ ಸುಮಾರು 20 ಜನ ಮಹಿಳೆಯರು ಹಾಗು 5-6 ಮಕ್ಕಳು ಎಂದು ಬಿಹಾರ ಗೃಹ ಕಾರ್ಯದರ್ಶಿ ಅಮಿರ್ ಸುಭಾನಿ ತಿಳಿಸಿದ್ದಾರೆ.
ದಸರಾದ ಪ್ರಮುಖ ಕಾರ್ಯಕ್ರಮವನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. ಜನರು 'ರಾವಣ ವಧೆ' ಕಾರ್ಯಕ್ರಮವನ್ನು ವೀಕ್ಷಿಸಿ ವಾಪಸ್ಸಾಗುವಾಗ ಈ ದುರಂತ ನಡೆದಿದೆ. 60 ಅಡಿ ಎತ್ತರದ ರಾವಣ ಪ್ರತಿಕೃತಿಗೆ ಬಾಣಬಿಟ್ಟು ಅಗ್ನಿಸ್ಪರ್ಶ ಮಾಡುವುದನ್ನು ವೀಕ್ಷಿಸಲು ಜನ ನೆರೆದಿದ್ದರು. ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಜಿ ಸಹ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಧಾನಿ ನರೇಂದ್ರ ಮೋದಿಯವರು ಬಿಹಾರ ಮುಖ್ಯಮಂತ್ರಿ ಜೊತೆ ಮಾತನಾಡಿ ಕಾಲ್ತುಳಿತ ದುರಂತದ ವಿವರಗಳನ್ನು ಪಡೆದುಕೊಂಡಿದ್ದಾರೆ. ಮೃತರ ಕುಟುಂಬಕ್ಕೆ ಕೇಂದ್ರ ಸರ್ಕಾರ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.