ಬೆಂಗಳೂರು : ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಲಾದ ಯೋಜನೆಗಳನ್ನು ಉದ್ಘಾಟನೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಕೆಪಿಸಿಸಿ ಕಛೇರಿಯಲ್ಲಿ ಮಾತನಾಡಿದ ಅವರು, ಯುಪಿಎ ಸರ್ಕಾರ ಯೋಜನೆಗಳನ್ನು ಜಾರಿಗೆ ತಂದು ಹಣ ಬಿಡುಗಡೆ ಮಾಡಿ ಕಾಮಗಾರಿಗಳನ್ನು ಮುಕ್ತಾಯ ಹಂತದವರೆಗೂ ತಂದು ನಿಲ್ಲಿಸಿತ್ತು. ಅಷ್ಟರಲ್ಲಿ ಚುನಾವಣೆ ನಡೆದು ನರೇಂದ್ರ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದಿತು. 120 ದಿನಗಳ ಎನ್.ಡಿ.ಎ ಅಧಿಕಾರದ ಅವಧಿಯಲ್ಲಿ ಒಂದೇ ಒಂದು ಹೊಸ ಯೋಜನೆಗಳನ್ನು ಘೋಷಿಸಿಲ್ಲ, ಯಾವ ಯೋಜನೆಗೂ ಶಂಕುಸ್ಥಾಪನೆ ಮಾಡಿಲ್ಲ ಎಂದರು.
ತುಮಕೂರಿನಲ್ಲಿ ಫುಡ್ ಪಾರ್ಕ್ ನಿರ್ಮಿಸಿದ್ದು, ಹಿಂದಿನ ಯುಪಿಎ ಸರ್ಕಾರ, ಉದ್ಘಾಟನೆ ಮಾಡಿ ಭಾರೀ ಪ್ರಚಾರ ಪಡೆದದ್ದು ನರೇಂದ್ರ ಮೋದಿ. ಗಂಗಾ ಶುದ್ಧೀಕರಣ ಯೋಜನೆ ರಾಜೀವ್ ಗಾಂಧಿ ಕನಸಾಗಿತ್ತು. ಅದಕ್ಕಾಗಿ ಅವರು ಬಹಷ್ಟು ಖರ್ಚು ಮಾಡಿದ್ದರು ಆದರೂ ಅದು ಸಾಧ್ಯವಾಗಿರಲಿಲ, ಈಗ ಆ ಯೋಜನೆಗೂ ದೊಡ್ದ ಪ್ರಚಾರ ಪಡೆಯಲಾಗುತ್ತಿದೆ ಎಂದು ಗುಡುಗಿದರು.
ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೂ ರೈಲ್ವೆ ಯೋಜನೆ ಜಾರಿಗೊಳಿಸಿದ್ದು ಯುಪಿಎ ಸರ್ಕಾರ, ಮುಂಬೈನಿಂದ ಅಹಮದಾಬಾದ್, ಅಹಮದಾಬಾದ್ ನಿಂದ ದೆಹಲಿ, ದೆಹಲಿಯಿಂದ ಕೋಲ್ಕತ್ತಾವರೆಗೂ ಸ್ಪೀಡ್ ರೈಲು ಕಾರಿಡಾರ್ ನಿರ್ಮಿಸಲು ಯುಪಿಎ ಸರ್ಕಾರ ಯೋಜನೆ ರೂಪಿಸಿ, ಜಪಾನ್ ಮತ್ತು ಚೀನಾದೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಆದರೆ ಈಗ ಮೋದಿ ಸರ್ಕಾರ ಅದನ್ನು ತಮ್ಮದೆಂದು ಹೇಳಿಕೊಳ್ಳುತ್ತಿದೆ ಎಂದರು.
ಹಿಂದಿನ ಸರ್ಕಾರದ ಯೋಜನೆಗಳನ್ನು ತಮ್ಮದೆಂದು ಹೇಳಿಕೊಳ್ಳುತ್ತಾ ಎನ್.ಡಿ.ಎ ಸರ್ಕಾರದ ನಾಯಕರು ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.