ನವದೆಹಲಿ : 'ಮಹಾರಾಷ್ಟ್ರ'ದಲ್ಲಿ ಬಿಜೆಪಿ-ಶಿವಸೇನೆ ನಡುವಿನ 25 ವರ್ಷಗಳ ಸುದೀರ್ಘ ಮೈತ್ರಿ ಮುರಿದುಬಿದ್ದಿರುವುದಕ್ಕೆ ಶಿವಸೇನೆ ಯುವ ಮುಖಂಡ ಆದಿತ್ಯ ಠಾಕ್ರೆ ತೀರ್ವ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚುನಾವಣೆ ಹಿನ್ನೆಲೆಯಲ್ಲಿ ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಶಿವಸೇನಾ ಯುವ ನಾಯಕ, 25ವರ್ಷಗಳ ಹಳೆಯ ಮೈತ್ರಿ ಮುರಿದುಬೀಳುತ್ತದೆ ಎಂದು ಊಹಿಸಿರಲಿಲ್ಲ ಎಂದಿದ್ದಾರೆ.
ಇದೇ ವೇಳೆ ತಮ್ಮನ್ನು ರಾಜಕೀಯದಲ್ಲಿ ಅನುಭವ ಇಲ್ಲದೇ ಇರುವ ವ್ಯಕ್ತಿಯೆಂದು ಹೇಳಿರುವ ಬಿಜೆಪಿ ನಾಯಕರ ಅಭಿಪ್ರಾಯಕ್ಕೆ ಠಾಕ್ರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಶಿವಸೇನೆ ತನ್ನ ಯುವ ನಾಯಕ ಆದಿತ್ಯ ಠಾಕ್ರೆ ಮೂಲಕ ಬಿಜೆಪಿಯೊಂದಿಗೆ ಮಾತುಕತೆ ನಡೆಸಿತ್ತು. ಈ ನಡೆಯನ್ನು ಅವಹೇಳನ ಮಾಡಿದ್ದ ಬಿಜೆಪಿ, ಶಿವಸೇನೆಯ ಯುವ ಮುಖಂಡನಿಗೆ ಸರ್ಕಾರ ರಚನೆಯಂತಹ ಗಂಭೀರ ವಿಷಯಗಳ ಬಗ್ಗೆ ಮಾತನಾಡಲು ಅನುಭವವಿಲ್ಲ ಎಂದು ಹೇಳಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ಆದಿತ್ಯ ಠಾಕ್ರೆ, ನಾನು ಸರ್ಕಾರ ರಚನೆಗಗಾಗಿ ಮತ ಚಲಾವಣೆ ಮಾಡುವ ಅಧಿಕಾರ ಹೊಂದಿರಬೇಕಾದರೆ ಸರ್ಕಾರ ರಚನೆ ಮಾಡುವ ನಿರ್ಧಾರ ಕೈಗೊಳ್ಳಲು ಅಸಮರ್ಥ ಎಂದು ಹೇಗೆ ಹೇಳಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
18ವರ್ಷಕ್ಕೆ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಅಧಿಕಾರವಿದ್ದರೆ 25ವರ್ಷಕ್ಕೆ ಸರ್ಕಾರ ರಚನೆ ಪ್ರಕ್ರಿಯೆ ಬಗ್ಗೆ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಬಿಜೆಪಿ ನಾಯಕರು ಹೇಗೆ ಹೇಳುತ್ತಾರೆ ಎಂದು ಆದಿತ್ಯ ಠಾಕ್ರೆ ಪ್ರಶ್ನಿಸಿದ್ದಾರೆ.
ಇದೇ ವೇಳೆ ಬಿಜೆಪಿಯಲ್ಲಿ ಪ್ರಮೋದ್ ಮಹಾಜನ್, ಗೋಪಿನಾಥ್ ಮುಂಡೆ ಅವರಂತಹ ಹಿರಿಯ ನಾಯಕರು ಇದ್ದಿದ್ದರೆ ಶಿವಸೇನೆ-ಬಿಜೆಪಿ ಮೈತ್ರಿ ಮುರಿಯುತ್ತಿರಲಿಲ್ಲ ಎಂದು ಆದಿತ್ಯ ಠಾಕ್ರೆ ಹೇಳಿದ್ದಾರೆ.