ಬೆಂಗಳೂರು : ಅ.2ರಂದು ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿಯಂದು ದೇಶಾದ್ಯಂತ ಸ್ವಚ್ಛ ಭಾರತ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ ಹಿನ್ನಲೆಯಲ್ಲಿ, ಕಡ್ಡಾಯವಾಗಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸುವಂತೆ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.
ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ಎಲ್ಲಾ ಶಾಲೆಗಳಲ್ಲಿ ಸ್ವಚ್ಛತಾ ಆಂದೋಲನ ನಡೆಸಿ, ಮ್ಮಕ್ಕಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವಂತೆ ಶಿಕ್ಷಣ ಇಲಾಖೆ ಆಯುಕ್ತ ಮೊಹಮದ್ ಮೊಹಿಸನ್ ಆದೇಶ ನೀಡಿದ್ದಾರೆ.
ಈ ನಡುವೆ ಮೈಸೂರಿನಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಗಾಂಧಿ ಜಯತಿ ಹಿನ್ನಲೆಯಲ್ಲಿ ಸ್ವಚ್ಛತಾ ಆಂದೋಲನದ ಬಗ್ಗೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಸ್ವಚ್ಛ ಭಾರತ ನಿರ್ಮಿಸುವ ಗುರಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅ.2ರಂದು ದೇಶವಾಸಿಗಳಿಗೆ ಸ್ವಚ್ಛತೆಯ ಪ್ರತಿಜ್ನಾ ವಿಧಿ ಬೋಧಿಸಲಿದ್ದಾರೆ.
ಗಾಂಧಿ ಜಯಂತಿ ದಿನದಂದು ದೆಹಲಿಯಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸ್ವಚ್ಛ ಭಾರತ ಅಭಿಯಾನಕ್ಕೆ ಸಂಕಲ್ಪ ಮಾಡಲಿದ್ದಾರೆ. ಅಂತೆಯೇ ಸರ್ಕಾರಿ ನೌಕರರು ಹಾಗೂ ಸಾರ್ವಜನಿಕರೂ ಕೂಡ ಪ್ರತಿಜ್ನೆ ಮಾಡಬೇಕು ಎಂದು ಕೇಂದ್ರ ಸರ್ಕಾರ ಕೋರಿದೆ.
2019ರ ಅ.2ರ ಗಾಂಧಿ ಜಯಂತಿ ವೇಳೆಗೆ ರಾಷ್ಟ್ರೀಯ ಆಂದೋಲನದ ಮೂಲಕ ಸ್ವಚ್ಛ ಭಾರತವನ್ನು ಸಾಕಾರಗೊಳಿಸಬೇಕು ಎಂಬ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.
ಸ್ವಚ್ಛತೆಗೆ ನಾನು ಬದ್ಧನಾಗಿದ್ದೇನೆ. ಪ್ರತಿ ವರ್ಷ 100 ಗಂಟೆ ಅಂದರೆ ವಾರಕ್ಕೆ ಎರಡು ಗಂಟೆ ಸಮಯವನ್ನು ಸ್ವಚ್ಛತಾ ಕಾರ್ಯಕ್ಕಾಗಿ ಮೀಸಲಿಡುತ್ತೇನೆ. ನಾನು ಕಸ ಎಸೆಯುವುದೂ ಇಲ್ಲ. ಇತರರು ಎಸೆಯಲೂ ಬಿಡುವುದಿಲ್ಲ ಎಂಬ ಪ್ರತಿಜ್ನೆಯನ್ನು ಪ್ರಧಾನಿ ಮೋದಿ ಜನರಿಗೆ ಬೋಧಿಸಲಿದ್ದಾರೆ.