ಚೆನ್ನೈ : ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲುಪಾಲಾಗಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಉತ್ತರಾಧಿಕಾರಿ ಆಯ್ಕೆ ಹುಡುಕಾಟ ಆರಂಭವಾಗಿದ್ದು, ಪನ್ನೀರಸೆಲ್ವಂ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಸಾಧ್ಯತೆಯಿದೆ.
ನೂತನ ಮುಖ್ಯಮಂತ್ರಿ ಆಯ್ಕೆಗೆ ಸಂಬಂಧಿಸಿದಂತೆ ಈಗಾಗಲೇ ಹಲವು ಸಚಿವರು ಜಯಲಲಿತಾ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಪನ್ನೀರಸೆಲ್ವಂ ಅವರನ್ನು ಆಯ್ಕೆ ಮಾಡಲು ಜಯಲಲಿತಾ ಸಮ್ಮತಿ ನೀಡಿದ್ದಾರೆ ಎಂದು ತಿಳಿದುಬಂದಿದೆ.
2001ರಲ್ಲಿ ತಾನ್ಸಿ ಭೂ ಹಗರಣದಲ್ಲಿ ಸಿಲುಕಿದ್ದ ಜಯಲಲಿತಾ, ಸುಪ್ರಿಂ ಕೋರ್ಟ್ ಆದೇಶದನ್ವಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ಕೆಲ ತಿಂಗಳ ಕಾಲ ಪನ್ನೀರಸೆಲ್ವಂ ಮುಖ್ಯಮಂತ್ರಿಯಾಗಿದ್ದರು. ಈ ವೇಳೆ ಅವರು ಮುಖ್ಯಮಂತ್ರಿ ಕಛೇರಿಯಲ್ಲಿ ಜಯಲಲಿತಾ ಕೂರುತಿದ್ದ ಸಿಎಂ ಕುರ್ಚಿ ಮೇಲೆ ಕೂರಲೂ ಹಿಂದೇಟು ಹಾಕುತ್ತಿದ್ದರಲ್ಲದೇ ಮತ್ತೊಂದು ಕುರ್ಚಿಯಲ್ಲಿ ಕೂರುತ್ತಿದ್ದರು. ಜಯಲಲಿತಾ ಅವರ ಆದೇಶವಿಲ್ಲದೇ ಒಂದು ಕಡತಕ್ಕೂ ಸಹಿ ಹಾಕುತ್ತಿರಲಿಲ್ಲ ಎನ್ನಲಾಗುತ್ತಿತ್ತು. ಅಷ್ಟರ ಮಟ್ಟಿಗೆ ಜಯಲಲಿತಾ ಅವರಿಗೆ ಗೌರವ ನೀಡುತ್ತಿದ್ದರು. ಹೀಗಾಗಿ ಪನ್ನೀರಸೆಲ್ವಂ ಮುಖ್ಯಮಂತ್ರಿಯಾದರೂ ಅಧಿಕಾರ ಸೂತ್ರ ಜಯಲಲಿತಾ ಕೈಯಲ್ಲೇ ಇರುತ್ತದೆ ಎಂಬುದು ನಿರ್ವಿವಾದವಾಗಿದೆ.
ಸಂಜೆ ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಚರ್ಚಿಸಲು ಎಐಎಡಿಎಂಕೆ ನಾಯಕರ ಉನ್ನತ ಮಟ್ಟದ ಸಭೆ ನಡೆಯಲಿದ್ದು, ಈಗಾಗಲೇ ಜಯಲಲಿತಾ ಸೂಚನೆ ಮೇರೆಗೆ ತಮಿಳುನಾಡಿನ ಎಲ್ಲಾ ಶಾಸಕರಿಗೂ ವಿಪ್ ಚಾರಿಯಾಗಿದೆ. ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ಎಲ್ಲಾ ಸಚಿವರು ಹಾಗೂ ತಮ್ಮ ಕ್ಷೇತ್ರದಲ್ಲಿರುವ ಎಲ್ಲಾ ಶಾಸಕರಿಗೂ ಚೆನ್ನೈಗೆ ತೆರಳವಂತೆ ಸೂಚಿಸಲಾಗಿದೆ. ಎಲ್ಲರೂ ಸಭೆಯಲ್ಲಿ ಭಾಗವಹಿಸುವಂತೆ ತಿಳಿಸಲಾಗಿದೆ.
ಸಭೆ ಬಳಿಕ ಪಕ್ಷದ ನಾಯಕರು ರಾಜ್ಯಪಾಲ ರೋಸಯ್ಯ ಅವರನ್ನು ಭೇಟಿಯಾಗಲಿದ್ದಾರೆ. ಮೂಲಗಳ ಪ್ರಕಾರ ಪನ್ನೀರಸೆಲ್ವಂ ಆಯ್ಕೆ ಬಹುತೇಕ ಖಚಿತ ಎನ್ನಲಾಗಿದ್ದು, ಸೆ.29ರಂದು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎನ್ನಲಾಗಿದೆ.