ಬೆಂಗಳೂರು : ಗಾಂಧಿ ಜಯಂತಿ ದಿನದ ಪ್ರಯುಕ್ತ ಅಕ್ಟೋಬರ್ 2 ರಂದು ರಾಜ್ಯದ 160 ಗ್ರಾಮ ಪಂಚಾಯಿತಿಗಳಿಗೆ ಗಾಂಧಿ ಗ್ರಾಮ ಪುರಸ್ಕಾರಗಳನ್ನು ಮುಂಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಿಧಾನ ಸೌಧದ ಔತಣ ಸಭಾಂಗಣದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಪ್ರದಾನ ಮಾಡಲಿದ್ದಾರೆ. ಅಲ್ಲದೆ, ಈ ಸಂದರ್ಭದಲ್ಲಿಯೇ ರಾಜೀವ್ ಗಾಂಧಿ ಪಂಚಾಯಿತ್ ಸಶಕ್ತೀಕರಣ ಪ್ರೋತ್ಸಾಹ ಧನವನ್ನೂ ವಿತರಿಸಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ರಾಜ್ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಈ ಪ್ರೋತ್ಸಾಹ ಧನದ ಒಟ್ಟು ಮೊತ್ತ 12.78 ಕೋಟಿ ರೂ ಆಗಿದೆ. ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯತ್ಗಳಲ್ಲಿ ಉತ್ತಮ ನೈರ್ಮಲ್ಯ ನಿರ್ವಹಣೆಗಾಗಿ ತಲಾ ಒಂದು ಕೋಟಿ ರೂ ಪ್ರೋತ್ಸಾಹ ಧನವನ್ನೂ ಇದೇ ಸಂದರ್ಭದಲ್ಲಿ ವಿತರಣೆ ಮಾಡಲಾಗುವುದು ಎಂದು ಅವರು ಹೇಳಿದರು.
ರಾಜ್ಯವನ್ನು ಸಂಪೂರ್ಣವಾಗಿ ಬಯಲು ಬಹಿರ್ದಶೆ ಮುಕ್ತವಾಗಿಸಲು ಶೌಚಾಲಯಕ್ಕಾಗಿ ಸಮರ ಆಂದೋಲನವನ್ನು ಪ್ರಾರಂಭಿಸಲಾಗಿದೆ. ಗಾಂಧಿ ಜಯಂತಿಯ ಅಂಗವಾಗಿ ರಾಜ್ಯದ 100 ಜನವಸತಿಗಳನ್ನು ಬಯಲು ಬಹಿರ್ದಶೆ ಮುಕ್ತ ಎಂದು ಘೋಷಿಸಲಾಗುವುದು. ಈ ಎಲ್ಲಾ ಗ್ರಾಮಗಳಲ್ಲಿ ಶೇಕಡಾ 100 ರಷ್ಟು ಕುಟುಂಬಗಳು ಶೌಚಾಲಯವನ್ನು ಹೊಂದಿರುತ್ತವೆ. ಮುಂದಿನ ಗಣರಾಜ್ಯೋತ್ಸವ ದಿನಾಚರಣೆ ಜನವರಿ 26 ರಂದುಒಂದು ಸಾವಿರ ಜನ ವಸತಿ ಪ್ರದೇಶಗಳಲ್ಲಿ ಶೇಕಡಾ 100 ರಷ್ಟು ಬಯಲು ಬಹಿರ್ದಶೆ ಮುಕ್ತ ಗ್ರಾಮಗಳನ್ನಾಗಿ ಘೋಷಿಸಲು ಉದ್ದೇಶಿಸಲಾಗಿದೆ. ಅದೇ ವರ್ಷ ಸ್ವಾತಂತ್ರ್ಯೋತ್ಸವ ದಿನಾಚರಣೆ ಆಗಸ್ಟ್ 15 ರಂದು ಹತ್ತು ಸಾವಿರ ಜನವಸತಿಗಳಲ್ಲಿ ಶೌಚಾಲಯ ನಿರ್ಮಿಸಿ ಬಯಲು ಬಹಿರ್ದಶೆ ಮುಕ್ತ ಜನವಸತಿ ಪ್ರದೇಶ ಎಂದು ಘೋಷಿಸಲಾಗುವುದು ಎಂದು ತಿಳಿಸಿದರು.
ಮುಂದಿನ ವರ್ಷ ಅಕ್ಟೋಬರ್ 2 ರಂದು 20,000 ಜನವಸತಿ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಿಸಿ ಅವುಗಳನ್ನು ಬಯಲು ಬಹಿರ್ದಶೆ ಮುಕ್ತ ಗ್ರಾಮಗಳಾಗಿ ಪರಿವರ್ತಿಸಲಾಗುವುದು ಎಂದು ಸಚಿವರು ನುಡಿದರು. ಈಗಾಗಲೇ ಈ ಕಾರ್ಯಕ್ರಮದ ಅನ್ವಯ ಶೌಚಾಲಯ ನಿರ್ಮಿಸಿಕೊಳ್ಳುವ ಜಾಗೃತಿ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಈ ದಿನದವರೆಗೆ 5,02,403 ಶೌಚಾಲಯಗಳನ್ನು ನಿರ್ಮಿಸುವ ಅನುಮತಿ ಪತ್ರಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳು ವೈಯುಕ್ತಿಕ ಶೌಚಾಲಯ ನಿರ್ಮಿಸಲು ನಿಗದಿಪಡಿಸಿರುವ ಮೊತ್ತವನ್ನು ಹೆಚ್ಚಿಸುವಂತೆ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ನಿತಿನ್ ಗಡ್ಕರಿ ಅವರನ್ನು ಒತ್ತಾಯಿಸಿರುವುದರಿಂದ ಆ ಮೊತ್ತವನ್ನೂ 10,100 ರೂ ನಿಂದ 12,000ರೂ ಗಳಿಗೆ ಹೆಚ್ಚಿಸಲು ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಸಮ್ಮತಿಸಿ ಸೂಚಿಸಿದೆ ಎಂದು ವಿವರಿಸಿದರು.