ಬೆಂಗಳೂರು : ದೇಶಾದ್ಯಂತ ಕುತೂಹಲ ಕೆರಳಿಸಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪು ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯ ಪ್ರಕಟಿಸಲಿದೆ.
18 ವರ್ಷಗಳಿಂದ ವಿಚಾರಣೆ ನಡೆಯುತ್ತಿರುವ ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೀರ್ಪನ್ನು ಬೆಳಿಗ್ಗೆ 11 ಗಂಟೆಗೆ ಪರಪ್ಪನ ಅಗ್ರಹಾರ ಜೈಲಿನ ಆವರಣದಲ್ಲಿರುವ ವಿಶೇಷ ನ್ಯಾಯಾಲಯ ಪ್ರಕಟಿಸಲಿದ್ದು, ತೀರ್ಪು ಪ್ರಕಟಿಸಿವ ದಿನ ಖುದ್ದು ಹಾಜರಾಗುವಂತೆ ಸಿಎಂ ಜಯಲಲಿತಾ ಅವರಿಗೆ ನ್ಯಾಯಾಲಯ ಸೂಚಿಸಿತ್ತು. ಈ ಹಿನ್ನಲೆಯಲ್ಲಿ ಜಯಲಲಿತಾ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಪ್ರಕರಣದಲ್ಲಿ ಜಯ ಸಿಗುತ್ತಾ ಅಥವಾ ಜೈಲಾಗುತ್ತಾ, ಅವರ ಮುಖ್ಯಮಂತ್ರಿ ಕುರ್ಚಿ ಉಳಿಯುತ್ತಾ ಎಂಬ ಕುತೂಹಲಕ್ಕೆ ಮಧ್ಯಾಹ್ನದ ಹೊತ್ತಿಗೆ ತೆರೆ ಬೀಳಲಿದೆ.
ಜಯಲಲಿತಾ 1991ರಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. 5 ವರ್ಷದ ಅಧಿಕಾರಾವಧಿಯಲ್ಲಿ ಘೋಷಣೆಗಿಂತ ಅಧಿಕ ಆಸ್ತಿ ಗಳಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ತಮ್ಮ ಬಳಿ 3 ಕೋಟಿ ರೂ.ಮೌಲ್ಯದ ಆಸ್ತಿ ಇದೆ ಎಂದು 1991ರಲ್ಲಿ ಜಯಲಲಿತಾ ಘೋಷಿಸಿಕೊಂಡಿದ್ದರು. ಅಲ್ಲದೇ ಅಧಿಕಾರಾವಧಿಯಲ್ಲಿ ಮಾಸಿಕ 1ರೂ. ವೇತನ ಪಡೆಯುವುದಾಗಿ ಹೇಳಿಕೊಂಡಿದ್ದರು. ಆದರೆ 5 ವರ್ಷದ ಅಧಿಕಾರಾವಧಿ ಮುಗಿಯುತ್ತಿದ್ದಂತೆಯೇ ಜಯಾ ಆಸ್ತಿ ಮೌಲ್ಯ 65.86 ಕೋಟಿ ರೂ.ಗೆ ಏರಿಕೆಯಾಗಿತ್ತು.
ಈ ಕುರಿತು ಡಿಎಂಕೆ ದೂರಿನನ್ವಯ ವಿಶೇಷ ತನಿಖಾ ತಂಡ ರಚಿಸಿ ತನಿಖೆ ಕೈಗೊಂಡಾಗ 28 ಕೆ.ಜಿ ಚಿನ್ನ, 12 ಸಾವಿರ ಸೀರೆಗಳು, ಕೊಡನಾಡು, ತಿರುನೆಲ್ವೇಲಿಯಲ್ಲಿ ತಲಾ1 ಸಾವಿರ ಎಕರೆ ಜಮೀನು, 100ಕ್ಕೂ ಹ್ಯೆಚ್ಚು ಬ್ಯಾಂಕ್ ಖಾತೆಗಳು ಪತ್ತೆಯಾಗಿದ್ದವ್ವು. ಈ ಹಿನ್ನಲೆಯಲ್ಲಿ 1996ರಲ್ಲಿ ಸೆ.18 ರಂದು ಜಯಲಲಿತಾ ಮತ್ತು ಅವರ ದತ್ತುಪುತ್ರ ಸುಧಾಕರನ್, ಸ್ನೇಹಿತೆ ಶಶಿಕಲಾ ನಟರಾಜನ್, ಜೆ.ಇಳವರಸಿ ವಿರುದ್ಧ ಪ್ರಕರಣ ದಾಖಲಾಗಿತ್ತು.