ಮುಂಬೈ : ಮಹಾರಾಷ್ಟ್ರದಲ್ಲಿ 25 ವರ್ಷಗಳ ಬಿಜೆಪಿ-ಶಿವಸೇನೆ ನಡುವಿನ ಮೈತ್ರಿ ಅಂತ್ಯಗೊಂಡ ಬೆನ್ನಲ್ಲೇ ಬಿಜೆಪಿ ವಿರುದ್ಧ ಶಿವಸೇನೆ ವಾಗ್ದಾಳಿ ನಡೆಸಿದೆ. ಬಿಜೆಪಿ ನಾಯಕರು ಮಹಾರಾಷ್ಟ್ರದ ವೈರಿಗಳು ಎಂದು ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ.
ಬಿಜೆಪಿ-ಶಿವಸೇನೆಯ ಸುದೀರ್ಘ ಮೈತ್ರಿ ಮುಂದುವರೆಯಬೇಕು ಎಂಬುದು ಮೈತ್ರಿಕೂಟದ ಇತರ ಪಕ್ಷಗಳ ಬಯಕೆಯಾಗಿತ್ತು. ಇದಕ್ಕಿಂತ ಹೆಚ್ಚಾಗಿ ಮಹಾರಾಷ್ಟ್ರದ 11 ಕೋಟಿ ಜನತೆ ಕೂಡ ಇದನ್ನೇ ಬಯಸಿದ್ದರು. ಆದರೆ ಈ ಭಾವನೆಗಳಿಗೆ ಬೆಲೆ ಕೊಡದ ಬಿಜೆಪಿ ನಾಯಕರು ಮೈತ್ರಿಯನ್ನು ಕಡಿದುಕೊಂಡಿದ್ದಾರೆ. ಬಿಜೆಪಿ ನಾಯಕರು ಮಹಾರಾಷ್ಟ್ರದ ಶತ್ರುಗಳು ಎಂದು ವಾಗ್ದಾಳಿ ನಡೆಸಿದ್ದಾರೆ.
ಹಿಂದೂತ್ವದ ಸಿದ್ಧಾಂತದ ಮೇಲೆ ಕಳೆದ 25 ವರ್ಷಗಳಿಂದ ಬಿಜೆಪಿ-ಶಿವಸೇನೆ ಮೈತ್ರಿ ಮುಂದುವರೆದಿತ್ತು. ಆದರೀಗ ಮೈತ್ರಿ ಮುರಿದುಕೊಂಡಿರುವ ಬಿಜೆಪಿಯ ಕೃತ್ಯ ಸಂಯುಕ್ತ ಮಹಾರಾಷ್ಟ್ರ ಚಳುವಳಿಯಲ್ಲಿ ಹುತಾತ್ಮರಾದ 105 ಮರಾಠಿಗರಿಗೆ ಮಾಡಿದ ಅಪಮಾನ. ಬಿಜೆಪಿ ಹಾಗೂ ಇತರ ಪಕ್ಷಗಳ ಜತೆಗಿನ ಮಿತ್ರತ್ವ ಮೊದಲಿನಂತೆ ಉಳಿಸಿಕೊಳ್ಳಲು ನಾವು ಯತ್ನಿಸಿದ್ದೆವು ಎಂದು ತಿಳಿಸಿದ್ದಾರೆ.
ಎಲ್ಲಾ ರಾಜಕೀಯ ಆಟಗಳು ಮಹಾರಾಷ್ಟ್ರದ ಆರ್ಥಿಕ ಸ್ಥಿತಿಯ ಮೇಲೆ ಯಾವುದೇ ಋಣಾತ್ಮಕ ಪರಿಣಾಮ ಬೀರದಿರಲಿ ಎಂಬುದು ನಮ್ಮ ಆಶಯ ಎಂದು ಹೇಳಿದ್ದಾರೆ.