ತುಮಕೂರು : ತೆಲಂಗಾಣ ಮತ್ತು ಸೀಮಾಂಧ್ರ ರಾಜ್ಯಕ್ಕೆ ವಿಶೇಷ ಪ್ಯಾಕೇಜ್ ನೀಡಿರುವಂತೆ ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೂ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.
ತುಮಕೂರಿನಲ್ಲಿ ಫುಡ್ ಪಾರ್ಕ್ ಉದ್ಘಾಟನೆ ವೇಳೆ ಮಾತನಾಡಿದ ಅವರು, ಆಂಧ್ರ ವಿಭಜನೆಯಾದಾಗ ತೆಲಂಗಾಣ ಹಾಗೂ ಸೀಮಾಂಧ್ರ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ವಿಶೇಷ ಪ್ಯಾಕೇಜ್ ಘೋಷಣೆಯಾಗಿದೆ. ಅದರಂತೆಯೇ ಕರ್ನಾಟಕಕ್ಕೂ ವಿಶೇಷ ಪ್ಯಾಕೇಜ್ ನೀಡಬೇಕು ಎಂದರು.
ಕರ್ನಾಟಕದ ಹೈದ್ರಾಬಾದ್-ಕರ್ನಾಟಕ ಭಾಗ ಕೂಡ ಹಿಂದುಳಿದಿದ್ದು, ಆಂಧ್ರ, ತೆಲಂಗಾಣ ಮಾದರಿಯಲ್ಲಿಯೇ ನಮಗೂ ವಿಶೇಷ ಪ್ಯಾಕೇಜ್ ನೀಡಬೇಕು. ಇಲ್ಲವಾದಲ್ಲಿ ಈ ರಾಜ್ಯಗಳು ನಮ್ಮ ಅಕ್ಕಪಕ್ಕದ ರಾಜ್ಯಗಳಾಗಿದ್ದು, ಉಭಯ ರಾಜ್ಯಗಳ ನಡುವೆ ಕೈಗಾರಿಕಾಭಿವೃದ್ಧಿಯಲ್ಲಿ ಅನಾರೋಗ್ಯಕರ ಸ್ಪರ್ಧೆ ಏರ್ಪಡುತ್ತದೆ. ಹೀಗಾಗಿ ರಾಜ್ಯಕ್ಕೂ ಆರ್ಥಿಕ ಯೋಜನೆಗಳನ್ನು ಘೋಷಿಸಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ವೈವಿದ್ಯಮಯ ಹಣ್ಣು, ತರಕಾರಿ ಬೆಳೆಗಳನ್ನು ಬೆಳೆಯಲಾಗುತ್ತದೆ. ಆದರೆ ಸೂಕ್ತ ಮಾರುಕಟ್ಟೆಯಿಲ್ಲದೇ, ಉತ್ತಮ ಗುಣಮಟ್ಟದ ಗೋದಾಮುಗಳಿಲ್ಲದೇ ರೈತರು ಬೆಳೆದ ಬೆಳೆಗಳು ಹಾಳಾಗುತ್ತಿವೆ. ಅಲ್ಲದೇ ರೈತರ ಬೆಳೆಗಳಿಗೆ ಸಮರ್ಪಕವಾದ ಬೆಲೆ ಕೂಡ ಲಭ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಫುಡ್ ಪಾರ್ಕ್ ರೈತರಿಗೆ ಅನುಕೂಲವಾಗಲಿದೆ ಎಂದರು.