ನವದೆಹಲಿ : 'ಲವ್ ಜಿಹಾದ್' ಎಂಬುದನ್ನು ರಾಜಕೀಯ ಧೃವೀಕರಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ಲವ್ ಜಿಹಾದ್ ನಡೆಯುತ್ತಿದೆ ಎಂಬುದು ವದಂತಿಯಷ್ಟೇ ಎಂದು ಜಮಾಯತ್ ಉಲ್ಮಾ-ಐ ಹಿಂದ್ ನ ಪ್ರಧಾನ ಕಾರ್ಯದರ್ಶಿ ಮೌಲಾನಾ ಮಹಮೂದ್ ಮದನಿ ಹೇಳಿದ್ದಾರೆ.
ಖಾಸಗಿ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿರುವ ಮದನಿ, ಲವ್ ಜಿಹಾದ್ ಎಂಬ ಪಿತೂರಿ ನಡೆಯುತ್ತಿಲ್ಲ. ಆದರೆ ರಾಜಕೀಯ ಧೃವೀಕರಣಕ್ಕೆ ಬಳಸಿಕೊಳ್ಳುತ್ತಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಡೆಗಟ್ಟಬೇಕು ಎಂದು ಮೌಲಾನಾ ಮಹಮೂದ್ ಮದನಿ ಒತ್ತಾಯಿಸಿದ್ದಾರೆ.
ಲವ್ ಜಿಹಾದ್ ಬಗ್ಗೆ ವದಂತಿಗಳು ಹರಡದಂತೆ ತಡೆಗಟ್ಟಲು ಪ್ರಧಾನಿ ಕಠಿಣ ಕ್ರಮ ಕೈಗೊಳ್ಳಬೇಕು, ಅಲ್ಲದೇ ಲವ್ ಜಿಹಾದ್ ಯಾರಾದರೂ ನಡೆಸುತ್ತಿದ್ದರೆ ಅವರ ವಿರುದ್ಧ ಕಠಣ ಕ್ರಮವನ್ನೂ ಕೈಗೊಳ್ಳಬೇಕೆಂದು ಮದನಿ ಅಭಿಪ್ರಾಯಪಟ್ಟಿದ್ದಾರೆ.
ಹಿಂದೂಗಳಾಗಲೀ ಮುಸ್ಲಿಮರಾಗಲೀ ಅನ್ಯಧರ್ಮೀಯರೊಡನೆ ವಿವಾಹವಾಗುವುದನ್ನು ಸಮ್ಮತಿಸುವುದಿಲ್ಲ ಎಂದು ಇದೇ ವೇಳೆ ಮದನಿ ತಿಳಿಸಿದ್ದಾರೆ.
ಭಾರತದಲ್ಲಿರುವವರೆಲ್ಲರೂ ಹಿಂದೂಗಳೆಂಬ ಇತ್ತೀಚಿಗೆ ಕೇಳಿಬರುತ್ತಿರುವ ಅಭಿಪ್ರಾಯದ ಬಗ್ಗೆಯೂ ಪ್ರತಿಕ್ರಿಯಿಸಿರುವ ಜಮಾಯತ್ ಉಲ್ಮಾ-ಐ ಹಿಂದ್ ನ ಪ್ರಧಾನ ಕಾರ್ಯದರ್ಶಿ, ನಾನು ಪ್ರತಿಯೊಬ್ಬ ಭಾರತೀಯನನ್ನೂ ಹಿಂದಿ ಎಂದೇ ಭಾವಿಸಿರುವೆ, ಹಿಂದಿ ಮುಸ್ಲಿಮರು ಹಿಂದಿ ಕ್ರಿಶ್ಚಿಯನ್ನರು ಎಂದು ಹೇಳಿಕೊಳ್ಳಲು ಯಾರಿಗೂ ಸಮಸ್ಯೆ ಇಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.