Belthangadi : ರಾಮಮಂದಿರ ನಿರ್ಮಾಣ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಎರಡು ವರ್ಷಗಳ ಗಡುವು ನೀಡಲಾಗುವುದು ಎಂದು ಬಜರಂಗ ದಳ ರಾಷ್ಟ್ರೀಯ ಸಂಯೋಜಕ ರಾಜೇಶ್ ಪಾಂಡೆ ತಿಳಿಸಿದ್ದಾರೆ.
ಕನ್ಯಾಡಿಯಲ್ಲಿ ಬೈಠಕ್ ಉದ್ಘಾಟಿಸಿ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣ ವಿಚಾರದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳದಲ್ಲಿ ಯಾವುದೇ ಬದಲಾವಣೆಯೂ ಇಲ್ಲ ಎಂದರು.
ಭಯೋತ್ಪಾದನೆ, ನಿರೋದ್ಯೋಗ, ಅನರಕ್ಷತೆ, ಪ್ರತ್ಯೇಕವಾದಗಳನ್ನು ನಿರ್ಮೂನೆ ಮಾಡುವ ಸಲುವಾಗಿ ದೇಶದ ಜನತೆ ನರೇಂದ್ರ ಮೋದಿಯವರನ್ನು ಆಯ್ಕೆ ಮಾಡಿದ್ದಾರೆ. ಈ ಸಮಸ್ಯೆಗಳನ್ನು ಬಗೆಹರಿಸಲು ಪ್ರಧಾನಿ ಮೋದಿಯವರಿಗೆ ಅವಕಾಶ ನೀಡಬೇಕು ಎಂಬ ಕಾರಣದಿಂದ ಸಧ್ಯಕ್ಕೆ ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ಹೆಚ್ಚಿನ ಒತ್ತಡ ಹೇರದಿರಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಎರಡು ವರ್ಷದ ಬಳಿಕ ರಾಮಮಂದಿರ ನಿರ್ಮಾಣದಲ್ಲಿ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಇಲ್ಲವಾದಲ್ಲಿ ಬೃಹತ್ ಆಂದೋಲನ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅ.10, 11 ಹಾಗೂ 12ರಂದು ಹರಿದ್ವಾರದಲ್ಲಿ ಬಜರಂಗ ದಳ ರಾಷ್ಟ್ರೀಯ ಸಮ್ಮೇಳನ ನಡೆಯಲಿದ್ದು, ಅದರಲ್ಲಿ ಹಲವಾರು ಸಂತರು ಭಾಗವಹಿಸಲಿದ್ದಾರೆ. ಅವರಿಂದ ಸೂಕ್ತ ಮಾರ್ಗದರ್ಶನ ಪಡೆಯಲಾಗುತ್ತದೆ ಎಂದು ತಿಳಿಸಿದರು.
ಅಲ್ಲದೇ ಡಿಸೆಂಬರ್, ಜನವರಿ ಹಾಗೂ ಫೆಬ್ರವರಿಯಲ್ಲಿ ಮುಂಬೈ, ದೆಹಲಿ, ಕೊಲ್ಕತ್ತಾ, ಭೋಪಾಲ್ ನಲ್ಲಿ ಹಿಂದೂ ಸಮ್ಮೇಳನ ನಡೆಯಲಿದೆ ಎಂದು ತಿಳಿಸಿದರು.