ಮುಲ್ತಾನ್ : ಭಾರತದ ವಶದಲ್ಲಿರುವ ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿದ್ದು, ಅದನ್ನು ತಾನು ವಾಪಸ್ ಪಡೆಯುವುದಾಗಿ ಪಾಕ್ ಮಾಜಿ ಪ್ರಧಾನಿ ಬೆನಜಿರ್ ಭುಟ್ಟೋ ಪುತ್ರ, ಪಾಕಿಸ್ತಾನ ಪೀಪಲ್ಸ್ ಪಾರ್ಟಿ(ಪಿಪಿಪಿ) ನಾಯಕ ಬಿಲಾವಲ್ ಭುಟ್ಟೋ ಹೇಳಿದ್ದಾರೆ.
ಪಂಜಾಬ್ ನ ಮುಲ್ತಾನ್ ಪ್ರಾಂತ್ಯದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅವರು, ನಾನು ಭಾರತದ ವಶದಲ್ಲಿರುವ ಕಾಶ್ಮೀರವನ್ನು ಸಂಪೂರ್ಣವಾಗಿ ಹಿಂಪಡೆಯುತ್ತೇನೆ. ಅದರ ಒಂದಿಂಚು ಸ್ಥಳವನ್ನೂ ಬಿಡದೇ ವಾಪಸ್ ಪಡೆಯುತ್ತೇನೆ. ಕಾರಣ ಪಾಕಿಸ್ತಾನದ ಇತರ ಪ್ರಾಂತ್ಯಗಳಂತೆಯೇ ಕಾಶ್ಮೀರ ಕೂಡ ಪಾಕಿಸ್ತಾನದ್ದೇ ಆಗಿದೆ. ಅದು ಪಾಕಿಸ್ತಾನಕ್ಕೆ ಸೇರಲೇಬೇಕಾಗಿದೆ ಎಂದು ಗುಡುಗಿದ್ದಾರೆ.
ಇಪ್ಪತ್ತು ವರ್ಷದ ಬಿಲಾವಲ್ ಭುಟ್ಟೋ ತನ್ನ ಕಾರ್ಯಕರ್ತರನ್ನುದ್ದೇಶಿಸಿ ಈ ಹೇಳಿಕೆ ನೀಡುವಾಗ ಪಾಕ್ ಮಾಜಿ ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಮತ್ತು ರಾಜಾ ಪರ್ವೇಜ್ ಅಶ್ರಫ್ ಉಪಸ್ಥಿತರಿದ್ದರು. 2018ರಲ್ಲಿ ಆಕಿಸ್ತಾನದಲ್ಲಿ ನಡೆಯಲಿರುವ ಚುನವಣೆಯಲ್ಲಿ ಸ್ಪರ್ಧಿಸುವ ತನ್ನ ಯೋಜನೆಯನ್ನು ಇದೇ ಸಂದರ್ಭದಲ್ಲಿ ಬಿಲಾವಲ್ ಬಹಿರಂಗಗೊಳಿಸಿದ್ದಾರೆ.
ಬಿಲಾವಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್, ಬಿಲಾವಲ್ ಭ್ರಮೆಯಲ್ಲಿದ್ದಂತಿದೆ. ಕಾಶ್ಮಿರವನ್ನು ಭಾರತ ಯಾವುದೇ ಕಾರಣಕ್ಕೂ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.